×
Ad

ಆರೆಸ್ಸೆಸ್‌ ಬಗ್ಗೆ ಅರಿವು ಪಡೆಯಲು ಶಾಖೆಗೆ ಬನ್ನಿ: ಪ್ರಿಯಾಂಕ್ ಖರ್ಗೆಗೆ ಸಿಟಿ ರವಿ ಆಹ್ವಾನ

Update: 2026-06-17 19:20 IST

ಕಲಬುರಗಿ : ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕುರಿತು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಆರೆಸ್ಸೆಸ್‌ನ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸಿದರೆ ಅವರ ಮನಸ್ಸಿನಲ್ಲಿರುವ ಪೂರ್ವಗ್ರಹಗಳು ದೂರವಾಗಬಹುದು ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೋಹನ್ ಭಾಗವತ್ ಅವರು ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಸಮರ್ಪಿಸಿಕೊಂಡಿರುವ ವ್ಯಕ್ತಿ. ಇಂತಹ ಹಿರಿಯರ ಬಗ್ಗೆ ಮಾತನಾಡುವಾಗ ಅವರ ಹಿರಿತನ ಮತ್ತು ಅನುಭವವನ್ನು ಗೌರವಿಸಬೇಕು" ಎಂದು ಹೇಳಿದರು.

ಆರೆಸ್ಸೆಸ್‌ನ ಶತಮಾನ ಪಯಣವೇ ಅದರ ಕಾರ್ಯವೈಖರಿ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ ಸಿಟಿ ರವಿ, ಸಂಘವು ಯಾವುದೇ ಕಂಪನಿ, ರಾಜಕೀಯ ಪಕ್ಷ ಅಥವಾ ಸೊಸೈಟಿ ಅಲ್ಲ ಎಂದು ಹೇಳಿದರು. "ಸಂವಿಧಾನವು ನೋಂದಾಯಿತ ಹಾಗೂ ನೋಂದಾಯಿಸದ ಸಂಘಟನೆಗಳನ್ನು ನಡೆಸಲು ಅವಕಾಶ ನೀಡಿದೆ. ಹೀಗಾಗಿ ಸಂಘದ ನೋಂದಣಿ ಕುರಿತ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದರು.

ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್‌ ಬಗ್ಗೆ ನಿಜವಾದ ಅರಿವು ಪಡೆಯಲು ಶಾಖೆಗೆ ಭೇಟಿ ನೀಡಬೇಕು ಎಂದು ಆಹ್ವಾನಿಸಿದ ಅವರು, "ಶಾಖೆಗೆ ಬರಲು ಯಾವುದೇ ನೋಂದಣಿ ಶುಲ್ಕವಿಲ್ಲ. ಅಲ್ಲಿ ಜಾತಿ ಕೇಳುವುದಿಲ್ಲ. ಸಂಸ್ಕಾರ ಉಚಿತವಾಗಿ ದೊರೆಯುತ್ತದೆ. ಸಂಘದ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದರೆ ಅವರ ಅಭಿಪ್ರಾಯದಲ್ಲಿ ಬದಲಾವಣೆ ಬರಬಹುದು" ಎಂದು ಹೇಳಿದರು.

ಸಂಘದ ಹಣಕಾಸು ಮತ್ತು ಲೆಕ್ಕಪತ್ರಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, "ಆರೆಸ್ಸೆಸ್‌ ಯಾವುದೇ ವ್ಯಾಪಾರ ಚಟುವಟಿಕೆ ನಡೆಸುವುದಿಲ್ಲ. ವರ್ಷಕ್ಕೊಮ್ಮೆ ಗುರುದಕ್ಷಿಣೆ ರೂಪದಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತದೆ. ಅದರ ಸಂಪೂರ್ಣ ಲೆಕ್ಕಪತ್ರಗಳು ಸಂಘದ ಬಳಿ ಇವೆ. ಸಂಘದ ಆಸ್ತಿ ಮತ್ತು ಸಂಪತ್ತಿನ ಬಗ್ಗೆ ಪ್ರಶ್ನಿಸುವವರು ಮೊದಲು ತಮ್ಮ ಸಂಪತ್ತಿನ ಮೂಲದ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು" ಎಂದು ಹೇಳಿದರು.

"ಪತ್ರ ಬರೆದಿದ್ದು ನಾನು ಅಲ್ಲ, ಸರ್ಕಾರ" ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಇಂತಹ ಪ್ರಶ್ನೆಗಳು ಹೊಸದೇನಲ್ಲ. ಹಿಂದೆಯೂ ಸರ್ಕಾರಗಳು ಮೂರು ಬಾರಿ ಆರೆಸ್ಸೆಸ್‌ ಮೇಲೆ ನಿಷೇಧ ಹೇರಿದ್ದವು. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಸಂಘ ತನ್ನ ನಿರ್ದೋಷಿತ್ವವನ್ನು ಸಾಬೀತುಪಡಿಸಿದೆ. ಈಗ ಅದೇ ಹಳೆಯ ಪ್ರಶ್ನೆಗಳು ಮತ್ತೆ ಕೇಳಿಬರುತ್ತಿವೆ" ಎಂದರು.

ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆಯುವ ಸ್ವಾತಂತ್ರ್ಯವಿದೆ ಎಂದು ಹೇಳಿದ ಅವರು, "ಅವರ ಪತ್ರಕ್ಕೆ ಕೇರಳದಲ್ಲಿ ಸರಸಂಘಚಾಲಕರೇ ಈಗಾಗಲೇ ಉತ್ತರ ನೀಡಿದ್ದಾರೆ" ಎಂದು ಹೇಳಿದರು.

"ಆರೆಸ್ಸೆಸ್‌ನವರು ಹಿಂದೂಗಳೇ ಅಲ್ಲ" ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ, "ಮೊದಲು ಹಿಂದೂ ಎಂದರೆ ಯಾರು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಹಿಂದೂ ಸಮಾಜವು ಕ್ಷಣಕ್ಷಣಕ್ಕೂ ಬಣ್ಣ ಬದಲಾಯಿಸುವುದಿಲ್ಲ. ಎಲ್ಲ ಬಣ್ಣಗಳನ್ನೂ ತನ್ನದಾಗಿ ಸ್ವೀಕರಿಸುವ ವಿಶಾಲ ಮನೋಭಾವ ಹೊಂದಿದೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News