ದಾಲ್ ಉದ್ಯಮಕ್ಕೆ ರಫ್ತು ಅವಕಾಶ ಬಳಸಿಕೊಳ್ಳಿ: ಶಾಸಕಿ ಕನೀಜ್ ಫಾತಿಮಾ
ದಾಲ್ ಮಿಲ್ಲರ್ಗಳಿಗೆ ರಫ್ತು–ಆಮದು ತರಬೇತಿ: ಜಾಗತಿಕ ಮಾರುಕಟ್ಟೆ ಅವಕಾಶಗಳ ಕುರಿತು ಸಮಗ್ರ ಮಾಹಿತಿ
ಕಲಬುರಗಿ: ಗುಲ್ಬರ್ಗ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಬೆಂಬಲ ಹಾಗೂ ಪುಣೆಯ ಅಷ್ಟಂ ಟ್ರೇಡಿಂಗ್ ಸಹಯೋಗದಲ್ಲಿ ದಾಲ್ ಮಿಲ್ಲರ್ಗಳಿಗಾಗಿ ಆಯೋಜಿಸಿದ್ದ ವಿಶೇಷ ‘ರಫ್ತು–ಆಮದು ಜಾಗೃತಿ ತರಬೇತಿ ಕಾರ್ಯಕ್ರಮ’ ಭಾನುವಾರ ನಗರದ ನೆಹರು ಗಂಜ್ನ ಎಸ್.ಬಿ. ಪಾಟೀಲ್ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ಜಿಲ್ಲೆಯ ದಾಲ್ ಉದ್ಯಮಕ್ಕೆ ದೇಶ–ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಅವಕಾಶಗಳಿದ್ದು, ಇಂತಹ ತರಬೇತಿ ಕಾರ್ಯಕ್ರಮಗಳು ಉದ್ಯಮಿಗಳಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಪರಿಚಯಿಸುವುದರ ಜೊತೆಗೆ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಲು ಆತ್ಮವಿಶ್ವಾಸ ತುಂಬುತ್ತವೆ ಎಂದು ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದು ಜಿಲ್ಲೆಯ ರಫ್ತು ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಅವರು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ ಮಾತನಾಡಿ, ದಾಲ್ ಉದ್ಯಮವು ಕಲ್ಯಾಣ ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಲು ಗುಣಮಟ್ಟದ ಉತ್ಪನ್ನಗಳು, ಆಧುನಿಕ ತಂತ್ರಜ್ಞಾನ ಹಾಗೂ ರಫ್ತು–ಆಮದು ಕುರಿತ ಸಮಗ್ರ ಜ್ಞಾನ ಅತ್ಯಗತ್ಯ ಎಂದು ಹೇಳಿದರು.
ಅಷ್ಟಂ ಟ್ರೇಡಿಂಗ್ ಸಂಸ್ಥಾಪಕ ರಮೇಶ್ ಕಡಗಂಚಿ, ನಿರ್ದೇಶಕ ಯು. ಧರ್ಮರಾವ್ ಹಾಗೂ ಡಿಟಿಸಿ ತರಬೇತುದಾರ ಸುರೇಶ್ ಪೂಜಾರ್ (ಬೆಂಗಳೂರು) ತರಬೇತಿ ನಡೆಸಿಕೊಟ್ಟರು. ರಫ್ತು–ಆಮದು ಪ್ರಕ್ರಿಯೆಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯ ವ್ಯಾಪಾರ ಅವಕಾಶಗಳು, ಗುಣಮಟ್ಟದ ಮಾನದಂಡಗಳು, ಅಗತ್ಯ ದಾಖಲೆಗಳು, ಸರ್ಕಾರಿ ಪ್ರೋತ್ಸಾಹಕ ಯೋಜನೆಗಳು, ರಫ್ತು ವಿಸ್ತರಣೆಯ ತಂತ್ರಗಳು ಹಾಗೂ ಜಾಗತಿಕ ವ್ಯಾಪಾರದಲ್ಲಿನ ಸವಾಲುಗಳನ್ನು ಎದುರಿಸುವ ವಿಧಾನಗಳ ಕುರಿತು ಅವರು ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಾಲ್ ಮಿಲ್ಲರ್ಗಳ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಿ, ರಫ್ತು ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಅಗತ್ಯ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪ, ಕಾಂಗ್ರೆಸ್ ಮುಖಂಡ ಫರಾಜುಲ್ ಇಸ್ಲಾಂ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿ ಸಂಘದ ಅಧ್ಯಕ್ಷ ಸಂತೋಷ್ ಲ್ಯಾಂಗರ್, ಗುಲ್ಬರ್ಗ ಡಾಲ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೋಬಾಲ್, ಜಿಡಿಎಂಎ ಕಾರ್ಯದರ್ಶಿ ಹಣಮಂತರಾಯ ಎಂ. ತೋಟನಳ್ಳಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ಡಾಲ್ ಮಿಲ್ಲರ್ಗಳು ತರಬೇತಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡು, ರಫ್ತು–ಆಮದು ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿ ಮತ್ತು ಪ್ರಾಯೋಗಿಕ ಮಾರ್ಗದರ್ಶನ ಪಡೆದುಕೊಂಡರು.