×
Ad

Kalaburagi | ಶಹಾಬಾದ್‌ನಲ್ಲಿ ಸರಕಾರಿ ಶಾಲೆ ಉಳಿಸಲು ಆಗ್ರಹಿಸಿ ಎಐಡಿಎಸ್ಓ ಪ್ರತಿಭಟನೆ

Update: 2025-12-08 19:17 IST

ಕಲಬುರಗಿ: ಶಹಾಬಾದ್‌ ನಗರದಲ್ಲಿ ಸರ್ಕಾರಿ ಶಾಲೆ ಉಳಿಸಲು ಆಗ್ರಹಿಸಿ ಎಐಡಿಎಸ್ಓ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) - ಮ್ಯಾಗ್ನೆಟ್ ಶಾಲೆಗಳ ಯೋಜನೆ ಎಂಬ ವಂಚನೆಯ ಮುಖವಾಡದ ಅಡಿಯಲ್ಲಿ, ಸರ್ಕಾರವು ರಾಜ್ಯದಾದ್ಯಂತ 40,000ಕ್ಕೂ ಹೆಚ್ಚು ಶಾಲೆಗಳನ್ನು ವಿಲೀನಗೊಳಿಸುತ್ತಿದೆ. ಇದರ ಅಡಿಯಲ್ಲಿ ಶಹಾಬಾದ್‌ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತರನಳ್ಳಿ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಲಾಗಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಂಕರಲಿಂಗ ಗುಡಿ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಹಳೆ ಶಹಾಬಾದ್‌, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಶ್ರಯ ಕಾಲೋನಿ ರಾಮಘಾಡ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಬಿರಕಟ್ಟ ಶಾಲೆ ಗಳನ್ನು KPS ಗೆ ವಿಲೀನಗೊಳಿಸಿ ಸಂಪೂರ್ಣವಾಗಿ ಮುಚ್ಚುತ್ತಿರುವದನ್ನು ಸಂಘಟನೆ ಖಂಡಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಕೌನ್ಸಿಲ್ ಅಧ್ಯಕ್ಷ ತುಳಜರಾಮ ಎನ್.ಕೆ ಅವರು, ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ. "ಗುಣಮಟ್ಟ" ಮತ್ತು "ಮಾದರಿ ಶಾಲೆಗಳು" ಎಂಬ ಆಕರ್ಷಕ ಪದಗಳ ಹಿಂದೆ, ಉಚಿತ ಮತ್ತು ಸಾರ್ವತ್ರಿಕ ಶಿಕ್ಷಣದ ನಮ್ಮ ನವೋದಯ ಚಿಂತಕರು, ಕ್ರಾಂತಿಕಾರಿಗಳು ಗಳಿಸಿದ ಆಶಯವನ್ನು ನಾಶಪಡಿಸುವ ಪ್ರಯತ್ನ ಅಡಗಿದೆ ಎಂದು ಆರೋಪಿಸಿದರು.

ಯೋಜನೆಗೆ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ ಈಗಾಗಲೇ 2,000 ಕೋಟಿ ರೂ. ಸಾಲ ಪಡೆದಿರುವ ಮತ್ತು 10,000 ಕೋಟಿ ರೂ. ಸಾಲ ಪಡೆಯಲಿರುವ ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳು ಮುಚ್ಚೋದಿಲ್ಲ ಎಂಬ ಶಿಕ್ಷಣ ಮಂತ್ರಿಗಳ ಮಾತುಗಳು ಕೇವಲ ಜನಗಳನ್ನು ದಾರಿ ತಪ್ಪಿಸುವತ್ತ ಸಾಗುತ್ತಿವೆ, ಇನ್ನೊಂದು ಕಡೆ ಶಿಕ್ಷಣ ಇಲಾಖೆ ಜಾರಿ ಮಾಡುತ್ತಿರುವಂತಹ ವರದಿಗಳು ಸಂಪೂರ್ಣವಾಗಿ ಶಾಲೆಗಳನ್ನು ಅತಿ ವೇಗದಲ್ಲಿ ಮುಚ್ಚಲು ಮುನ್ನುಗುತ್ತಿದೆ. ಇದು ದುಡಿಯುವ ಜನಗಳಿಗೆ ಸರ್ಕಾರಗಳು ಬಗೆಯುತ್ತಿರುವಂತಹ ದ್ರೋಹವಾಗಿ ಎಂದು ದೂರಿದರು.

ಎಐಡಿಎಸ್ಓ ಜಿಲ್ಲಾ ಕೌನ್ಸಿಲ್ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡುತ್ತಾ, ಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಹಾಗೂ ತಾಂಡಾಗಳ ಶಾಲೆಗಳನ್ನು ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಬದಲಿಗೆ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ. ಸರ್ಕಾರ ಜನರ ಹೋರಾಟವನ್ನು ಎದುರಿಸಲು ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಬಡ ರೈತ-ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಸಂಪೂರ್ಣವಾಗಿ ಕಸೆದುಕೊಳ್ಳುವ ಈ ನೀತಿ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾ ಜಂಟಿ ಕಾರ್ಯದರ್ಶಿ ಬಾಬು ಪವರ್ ವಹಿಸಿದ್ದರು. ಜಿಲ್ಲಾ ಖಜಾಂಚಿ ಸ್ಪೂರ್ತಿ ಗುರುಜಲ್ಕರ್, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ದೇವರಾಜ್ ರಾಜೋಳ,ರಾಹುಲ್ ಜಾಧಾವ್, ಬೃಂದಾ ಎಸ್ ಜಿ, ಶೃಷ್ಠಿ ಎರ್.ಜಿ, ಅಜಯ, ಪವನ, ಶ್ರೀಶೈಲ್, ಕನಕ ಶಿಬಿರಕಟ್ಟಿ, ಸಿದ್ದು, ರಘು ಪವರ್ ,ಹಾಗೂ ಹಲವಾರು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಹಲವು ವಿದ್ಯಾರ್ಥಿಗಳು ಹಾಗೂ ಪೋಷಕರು ನವೋದಯ ಹಾಗೂ ಸ್ವಾತಂತ್ರ್ಯ ಹೋರಾಟದ ಮಹಾನ್ ವ್ಯಕ್ತಿಗಳ ಭಾವಚಿತ್ರ ಹಿಡಿದು, ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News