Kalaburagi | 'ಆರ್ಟಿಸ್ಟ್ ಇನ್ ರೆಸಿಡೆನ್ಸಿ' ಕಾರ್ಯಕ್ರಮಕ್ಕೆ ಕಲಾವಿದ ರೆಹಮಾನ್ ಪಟೇಲ್ ಆಯ್ಕೆ

Update: 2026-07-18 18:04 IST

ಕಲಬುರಗಿ : ಕಲಬುರಗಿಯ ಖ್ಯಾತ ಚಿತ್ರಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್ ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಜುಲೈ 19ರಿಂದ 29ರವರೆಗೆ ನಡೆಯಲಿರುವ ಪ್ರತಿಷ್ಠಿತ ‘ಆರ್ಟಿಸ್ಟ್ ಇನ್ ರೆಸಿಡೆನ್ಸಿ’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಭವನದ ಅಧ್ಯಕ್ಷರ ಕಾರ್ಯಾಲಯದ ಕಲಾ ಮತ್ತು ವಸ್ತುಸಂಗ್ರಹಾಲಯ ವಿಭಾಗದ ಉಪನಿರ್ದೇಶಕರ ಕಚೇರಿಯಿಂದ ನೀಡಲಾದ ಅಧಿಕೃತ ಆಹ್ವಾನ ಪತ್ರದ ಪ್ರಕಾರ, ರೆಹಮಾನ್ ಪಟೇಲ್ ಅವರ ಎರಡು ಚಿತ್ರಕೃತಿಗಳು ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿವೆ. ಅಲ್ಲದೆ, ಕಾರ್ಯಕ್ರಮದ ಅವಧಿಯಲ್ಲಿ ಅವರು ಸ್ಥಳದಲ್ಲೇ ಒಂದು ಹೊಸ ಚಿತ್ರಕೃತಿಯನ್ನು ರಚಿಸಲಿದ್ದು, ಅದನ್ನು ರಾಷ್ಟ್ರಪತಿ ಭವನದ ಶಾಶ್ವತ ಕಲಾಸಂಗ್ರಹಕ್ಕೆ ಸೇರ್ಪಡೆ ಮಾಡಲಾಗುತ್ತದೆ.

ಕಳೆದ ಮೂರು ದಶಕಗಳಿಂದ ವಿಜಯನಗರ ಶೈಲಿಯ ಸಾಂಪ್ರದಾಯಿಕ ಲಘುಚಿತ್ರಕಲೆ (ಮಿನಿಯೇಚರ್ ಪೇಂಟಿಂಗ್) ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೆಹಮಾನ್ ಪಟೇಲ್ ಅವರು ತಮ್ಮ ವಿಶಿಷ್ಟ ಕಲಾಸಾಧನೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಕಲಾಶೈಲಿಯನ್ನು ಅವರು ರಾಷ್ಟ್ರಪತಿ ಭವನದಲ್ಲಿ ಪ್ರತಿನಿಧಿಸಲಿದ್ದಾರೆ.

ಅವರ ಕಲಾಸೇವೆಯನ್ನು ಗುರುತಿಸಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಯೂ ಅದರಲ್ಲಿ ಪ್ರಮುಖವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರೆಹಮಾನ್ ಪಟೇಲ್, ದೇಶದ ಅತ್ಯುನ್ನತ ಸಾಂಸ್ಕೃತಿಕ ಹಾಗೂ ಸಾಂವಿಧಾನಿಕ ಪ್ರತಿಷ್ಠೆಯ ಸಂಕೇತವಾದ ರಾಷ್ಟ್ರಪತಿ ಭವನದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವ ಹಾಗೂ ಕರ್ನಾಟಕದ ವಿಜಯನಗರ ಕಲಾ ಪರಂಪರೆಯನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ತಮ್ಮ ಕಲಾಜೀವನದ ಮಹತ್ವದ ಮೈಲಿಗಲ್ಲು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News