ಕಲಬುರಗಿ | ಬಸವೇಶ್ವರ ಆಸ್ಪತ್ರೆಯಲ್ಲಿ ʼಬಸವಪ್ರಸಾದ ಉಚಿತ ಅನ್ನದಾಸೋಹʼ ಕಾರ್ಯಕ್ರಮ ಉದ್ಘಾಟನೆ
ಕಲಬುರಗಿ : ಮಹಿಳೆ ಮತ್ತು ಪುರುಷರು ಎಂಬ ಭೇದ ಭಾವ ಬದಿಗೊತ್ತಿ ಪ್ರತಿಯೊಬ್ಬರು ಕಾಯಕ ಮಾಡಿ, ಜೀವನ ನಡೆಸಬೇಕು ಎನ್ನುವ ಬಸವಣ್ಣನ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಜಗತ್ತಿಗೆ ಮಾದರಿ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ವಿಶೇಷ ಉಚಿತ ಅನ್ನದಾಸೋಹ ನೀಡುವ 'ಬಸವಪ್ರಸಾದ' ಎಂಬ ವಿನೂತನ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ತಾಂಡವವಾಡುತ್ತಿದ್ದ ಸಾಮಾಜಿಕ ಅಸಮಾನತೆ, ಮೌಢ್ಯ, ಕಂದಾಚಾರಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಬಸವಣ್ಣ ಸೇರಿದಂತೆ ಶರಣರು ಮಾಡಿದ ಕ್ರಾಂತಿ ಅದ್ಬುತ. ಪ್ರತಿಯೊಬ್ಬರು ತಾವು ದುಡಿದು ಇತರರಿಗೂ ನೀಡಬೇಕು ಎಂಬುದು ಬಸವಣ್ಣನ ಕನಸಾಗಿತ್ತು. ಬಸವಣ್ಣನವರು 12 ನೇ ಶತಮಾನದಲ್ಲೇ ದಾಸೋಹ ಮತ್ತು ಕಾಯಕದ ಪರಿಕಲ್ಪನೆಯ ಕುರಿತು ಜಾಗೃತಿ ಮೂಡಿಸಿದ್ದರು ಎಂದರು.
ಈ ಬಸವ ಪ್ರಸಾದವನ್ನು ದಾನಿಗಳಿಂದಲೆ ನಡೆಸಲಾಗುತ್ತಿದ್ದು ಒಬ್ಬ ದಾನಿಗಳು ಒಂದು ದಿನದ ಊಟದ ವ್ಯವಸ್ಥೆಗೆ 11,000 ರೂ ನಿಗದಿಪಡಿಸಲಾಗಿದ್ದು, ನಮ್ಮ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ತಮ್ಮ ಹಿರಿಯರ ವಿಶೇಷ ದಿನಗಳಂದು ಅವರ ಸವಿ ನೆನಪಿಗಾಗಿ ದೇಣಿಗೆ ನೀಡಲು ಮುಂದೆ ಬಂದಿದ್ದು, ಇಂದು ನಾನು ನನ್ನ ಕುಟುಂಬದ ಪರವಾಗಿ 55,000 ರೂ ನೀಡುತ್ತಿದ್ದೆನೆ ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ಚೆಕ್ ವಿತರಿಸಿದರು.
ಈ ಬಸವ ಪ್ರಸಾದದ ದಾಸೋಹಕ್ಕೆ ಸಂಸ್ಥೆಯ ಮುಖ್ಯ ಕಚೇರಿಯ ಸಿಬ್ಬಂದಿ ಆಡಳಿತಾಧಿಕಾರಿಗಳ ಮೂಲಕ 17,100 ರೂ ದೇಣಿಗೆ ತಲುಪಿಸಿದರು.
ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನು ಚವಾದಾಪೂರಿ ಹಿರೇಮಠ ಸಂಸ್ಥಾನದ ಡಾ.ರಾಜಶೇಖರ ಶಿವಾಚಾರ್ಯರು ವಹಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಡಾ.ಶರಣಬಸಪ್ಪ ಹರವಾಳ, ಆಡಳಿತ ಮಂಡಳಿ ಸದಸ್ಯರಾದ ಡಾ.ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ್, ಡಾ.ಅನಿಲಕುಮಾರ ಪಟ್ಟಣ, ಅನಿಲಕುಮಾರ ಮರಗೋಳ, ಡಾ.ಕಿರಣ್ ದೇಶಮುಖ್, ನಾಗಣ್ಣ ಘಂಟಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.