ಕಲಬುರಗಿ | ಕೇಂದ್ರ ಬಜೆಟ್ ಯುವಜನ–ಕಾರ್ಮಿಕ ವಿರೋಧಿ : ಡಿವೈಎಫ್ಐ ಖಂಡನೆ
ಕಲಬುರಗಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026–27ರ ಕೇಂದ್ರ ಬಜೆಟ್ ಯುವಜನ ಮತ್ತು ಕಾರ್ಮಿಕ ವಿರೋಧಿಯಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಾಗತಿಕ ಭೌಗೋಳಿಕ ರಾಜಕೀಯ ಪುನರ್ರಚನೆಗಳ ನಡುವೆ ಭಾರತದ ಆರ್ಥಿಕತೆ ನಿರ್ಣಾಯಕ ಘಟ್ಟದಲ್ಲಿದೆ ಎಂದು 2025–26ರ ಆರ್ಥಿಕ ಸಮೀಕ್ಷೆಯೇ ಒಪ್ಪಿಕೊಂಡಿದ್ದರೂ, ದೇಶ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳಿಗೆ ಬಜೆಟ್ ಸ್ಪಂದಿಸಿಲ್ಲ ಎಂದರು.
ಭಾರತವನ್ನು ಆರ್ಥಿಕ ಪ್ರಕ್ಷುಬ್ಧತೆಗೆ ಸಿದ್ಧಪಡಿಸುವ ಬದಲು, ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸುವ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರ ಪರಿಣಾಮವಾಗಿ ಕಾರ್ಮಿಕರು, ರೈತರು ಹಾಗೂ ನಿರುದ್ಯೋಗಿ ಯುವಕರ ಮೇಲೆ ಬಿಕ್ಕಟ್ಟಿನ ಹೊರೆ ಹೇರಲಾಗಿದೆ ಎಂದು ಟೀಕಿಸಿದರು.
ಉದ್ಯೋಗ ಸೃಷ್ಟಿಯ ಕುರಿತು ಬಜೆಟ್ ಸಂಪೂರ್ಣ ಮೌನ ವಹಿಸಿದೆ. ಸಾರ್ವಜನಿಕ ವಲಯದ ಉದ್ಯೋಗ ವಿಸ್ತರಣೆಗೆ ಯಾವುದೇ ಪ್ರಸ್ತಾಪವಿಲ್ಲ. ಉದ್ಯೋಗ ಖಾತರಿ ಯೋಜನೆಗಳನ್ನು ಅರ್ಥಪೂರ್ಣವಾಗಿ ಬಲಪಡಿಸುವ ಕ್ರಮಗಳೂ ಕಾಣಿಸುತ್ತಿಲ್ಲ ಎಂದು ಹೇಳಿದರು.
ʼಯುವ ಶಕ್ತಿʼ ಕುರಿತು ಹಣಕಾಸು ಸಚಿವರ ವಾಗ್ಮಿತೆ ಹಾಗೂ 2047ರ ಗುರಿಗಳನ್ನು ಮುಂದಿಟ್ಟುಕೊಂಡು ʼಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ”ದ ಕುರಿತು ಸ್ಥಾಯಿ ಸಮಿತಿ ರಚಿಸುವ ಪ್ರಸ್ತಾಪವು ವಂಚನೆಯಾಗಿಯೇ ಹೊರಹೊಮ್ಮಿದೆ. ಯುವಕರು ದೂರದ ಭರವಸೆಗಳು ಮತ್ತು ಸಮಿತಿಗಳ ಮೇಲೆ ಬದುಕಲು ಸಾಧ್ಯವಿಲ್ಲ; ಅವರಿಗೆ ಈಗಲೇ ಯೋಗ್ಯ ಉದ್ಯೋಗ ಅಗತ್ಯ ಎಂದು ಅವರು ಸ್ಪಷ್ಟಪಡಿಸಿದರು.
ಗಿಗ್ ಕಾರ್ಮಿಕರ ಕಲ್ಯಾಣ, ಕಾನೂನು ಮಾನ್ಯತೆ ಅಥವಾ ಸಾಮಾಜಿಕ ಭದ್ರತೆ ಒದಗಿಸುವ ಕುರಿತು ಬಜೆಟ್ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ಮುಂದಾಗುವ ಮೂಲಕ ಮತ್ತು ‘ಸುಧಾರಣೆ’ಗಳ ಹೆಸರಿನಲ್ಲಿ ನಿಯಂತ್ರಕ ಮಾನದಂಡಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಸಂಚಾಲಕ ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಸಾನಿಯಾ ಉಪಸ್ಥಿತರಿದ್ದರು.