ಕಲಬುರಗಿ | ಅಂತರರಾಜ್ಯ ಇರಾನಿ ಗ್ಯಾಂಗ್ ಬಂಧನ : 27.30 ಲಕ್ಷ ರೂ. ಮೌಲ್ಯದ ಸ್ವತ್ತು ವಶ
ಕಲಬುರಗಿ : ದೇಶದ ವಿವಿಧೆಡೆ ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದ 7 ಮಂದಿಯನ್ನೊಳಗೊಂಡ ಅಂತರರಾಜ್ಯ ಕುಖ್ಯಾತ ಇರಾನಿ ಗ್ಯಾಂಗ್ ಅನ್ನು ನಗರ ಪೊಲೀಸರು ಬಂಧಿಸಿದ್ದು, ಅವರಿಂದ 27.30 ಲಕ್ಷ ರೂ. ಮೌಲ್ಯದ ವಾಹನಗಳು, ಬಂಗಾರದ ಆಭರಣಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶಿವಾಜಿನಗರದ ನಿವಾಸಿಗಳಾದ ಜಹೀರ ಅಬ್ಬಾಸ್ ಅಲಿ, ಅಲಿ ರಝಾಕ್ ಬೇಗ್, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬೆವಿಲಿ, ಇಂದಿರಾನಗರದ ಲಾಲ ಸಮೀರ್ ಶೇಖ್, ಮಧ್ಯಪ್ರದೇಶದ ಭೂಪಾಲ ನಗರದ ಖಾಸಿಂ ಜೋಜೋ ಜಾಫ್ರಿ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶಿವಾಜಿನಗರ ಪರ್ಲಿ ನಿವಾಸಿ ಅಲಿಮಿರ್ಜಾ ದರಬೇಶ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬೆವಿಲಿಯ ಪಟೇಲ್ ಕಾಲೋನಿ ನಿವಾಸಿ ಜಾಫರ ಅಲಿ ಸೈಯದ್ ಹಾಗೂ ಮಹಾರಾಷ್ಟ್ರದ ಬೆವೆಲಿಯ ನಿವಾಸಿ ಜಾಫರ ಆಝಾಮ್ ಸೈಯದ್ ಎಂದು ಗುರುತಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ, ಜ.23ರಂದು ಬೆಳಗಿನ ಜಾವ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಕ್ರಾಸ್ ಸಮೀಪ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಕಾಸ್ತ್ರಗಳೊಂದಿಗೆ ವಾಹನ ಸವಾರರನ್ನು ತಡೆದು ದರೋಡೆ ನಡೆಸಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪರಿಣಾಮ ಗ್ಯಾಂಗ್ ಬಂಧನಕ್ಕೆ ಒಳಪಟ್ಟಿದೆ ಎಂದು ತಿಳಿಸಿದರು.
ಪೊಲೀಸ್ ಕಸ್ಟಡಿಯಲ್ಲಿ ನಡೆದ ವಿಚಾರಣೆಯಲ್ಲಿ, ಆರೋಪಿತರು ತೆಲಂಗಾಣದ ಮಹಬೂಬ್ನಗರ ಹಾಗೂ ಏವಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಂತೆ ನಟಿಸಿ ಬಂಗಾರದ ಆಭರಣಗಳನ್ನು ದೋಚಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಆರೋಪಿಗಳಿಂದ 90 ಗ್ರಾಂ ಬಂಗಾರದ ಆಭರಣಗಳು (ಅಂದಾಜು ಮೌಲ್ಯ 15.30 ಲಕ್ಷ ರೂ.), ಟಾಟಾ ಹೆಕ್ಸಾ ಕಾರು, ಟಿವಿಎಸ್ ಅಪಾಚಿ 160, ಹೋಂಡಾ ಹಾರ್ನೆಟ್ ಬೈಕ್, ರಾಡು, ತಲವಾರು, ಖಾರದ ಪುಡಿ, ಕಪ್ಪು ಬಟ್ಟೆಗಳು ಸೇರಿದಂತೆ ಒಟ್ಟು 27.30 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಪ್ರಮುಖ ಆರೋಪಿ ಜಹೀರ ಅಬ್ಬಾಸ್ ಅಲಿ ವಿರುದ್ಧ ಉತ್ತರ ಪ್ರದೇಶದ ಸಹಾರನ್ಪುರದಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಮಾಹಿತಿ ನೀಡಿದವರಿಗೆ 15 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಅಲ್ಲದೆ, ನಾಸಿಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳುವಾದ ಮೋಟಾರ್ಸೈಕಲ್ ಕೂಡ ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ವಿರುದ್ಧ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಠಾಣೆಗಳಲ್ಲಿ ನಕಲಿ ಪೊಲೀಸ್ ವೇಷಧಾರಣೆ, ವಂಚನೆ, ಸುಲಿಗೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ ನಾಯಕ್ (ಅಪರಾಧ & ಸಂಚಾರ), ಸಬ್ ಅರ್ಬನ್ ಉಪವಿಭಾಗದ ಎಸಿಪಿ ಬಸವೇಶ್ವರ, ಪಿಐ ನಟರಾಜ ಲಾಡೆ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.