Kalaburagi | ಉತ್ತಮ ಅಭ್ಯಾಸ ಬೆಳೆಸಿಕೊಂಡು ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಿ : ಡಾ.ಅಶ್ಫಾಕ್ ಅಹ್ಮದ್

Update: 2026-08-11 18:36 IST

ಕಲಬುರಗಿ: ಇಂಡಕ್ಷನ್ ಕಾರ್ಯಕ್ರಮವು ವಿದ್ಯಾರ್ಥಿ ಜೀವನದ ಹೊಸ ಪ್ರಯಾಣದ ಆರಂಭವಾಗಿದ್ದು, ಈ ಹಂತದಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆಗಳನ್ನು ಕೇಳುವ ಮನೋಭಾವ ಬೆಳೆಸಿಕೊಂಡು ಶಿಕ್ಷಕರೊಂದಿಗೆ ನಿರಂತರ ಸಂವಹನ ನಡೆಸಬೇಕು ಎಂದು ಕೆಬಿಎನ್ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಹಾಗೂ ವಿಜ್ಞಾನ ನಿಕಾಯದ ಡೀನ್ ಪ್ರೊ.ಅಶ್ಫಾಕ್ ಅಹ್ಮದ್ ಹೇಳಿದರು.

ನಗರದ ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ನಿಕಾಯದ ಬಿ.ಎಸ್ಸಿ. ನೂತನ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಕಡಿಮೆ ವ್ಯಾಕುಲತೆ, ಹೆಚ್ಚು ಕಲಿಕೆ’ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಅಂಕಗಳು ಮಾತ್ರ ವಿದ್ಯಾರ್ಥಿಯ ಯಶಸ್ಸಿನ ಮಾನದಂಡವಲ್ಲ. ನಿಗದಿಪಡಿಸಿಕೊಂಡ ಗುರಿಯನ್ನು ಸಾಧಿಸುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು. ಕೆಬಿಎನ್ ವಿಶ್ವವಿದ್ಯಾಲಯ ಉತ್ತಮ ಶೈಕ್ಷಣಿಕ ವಾತಾವರಣವನ್ನು ಒದಗಿಸುತ್ತಿದ್ದು, ಇದೇ ಕ್ಯಾಂಪಸ್‌ನಲ್ಲಿ ಎಂ.ಎಸ್ಸಿ. ಹಾಗೂ ಪಿಎಚ್.ಡಿ. ಪದವಿಗಳನ್ನು ವ್ಯಾಸಂಗ ಮಾಡುವ ಅವಕಾಶವಿದೆ. ಬಹುಶಿಸ್ತೀಯ ವಿಶ್ವವಿದ್ಯಾಲಯವಾಗಿರುವುದರಿಂದ ಸಂಶೋಧನೆಗೂ ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು.

ವಾಣಿಜ್ಯ ನಿಕಾಯದ ಡೀನ್ ಪ್ರೊ. ಶ್ರೀನಿವಾಸ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೇರೇಪಿಸಿದರು. ವಿದ್ಯಾರ್ಥಿ ಜೀವನದಲ್ಲಿ ಸಂವಹನದ ಮಹತ್ವವನ್ನು ವಿವರಿಸಿದರು.

ಶಿಕ್ಷಣ ನಿಕಾಯದ ಡೀನ್ ಪ್ರೊ. ಇಕ್ಬಾಲ್ ಮಟ್ಟು ಮಾತನಾಡಿ, ಕಠಿಣ ಪರಿಶ್ರಮವೇ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಇಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ. ಸುಭಾಷ್ ಕಮಲ ಅವರು ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ, ಅಧ್ಯಯನಕ್ಕೆ ಹೆಚ್ಚಿನ ಸಮಯ ಮೀಸಲಿಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಅಂಜುಮ್ ಪ್ರಾರ್ಥಿಸಿದರು. ಗಣಿತ ವಿಭಾಗದ ಉಪನ್ಯಾಸಕಿ ನಾಹೇದ್ ಅಂಜುಮ್ ಸ್ವಾಗತಿಸಿದರು. ಸೈಯದಾ ಹಾಜರಾ ಫಾತಿಮಾ ಹಾಗೂ ಉಜ್ಮಾ ಶೇಖ್ ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರೋಮನಾ ವಂದಿಸಿದರು. ನಂತರ ವಿಶ್ವವಿದ್ಯಾಲಯದ ಮುಖ್ಯ ಆಡಳಿತ ವಿಭಾಗಕ್ಕೂ ವಿದ್ಯಾರ್ಥಿಗಳನ್ನು ಭೇಟಿ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯದ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News