×
Ad

ಕಲಬುರಗಿ | ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದ ವಕೀಲನ ವಿರುದ್ಧ ಕ್ರಮಕ್ಕೆ ಆಗ್ರಹ

Update: 2025-10-06 19:38 IST

ಕಲಬುರಗಿ: ಸುಪ್ರೀಂಕೋರ್ಟ್ ‌ಮುಖ್ಯ‌ ನ್ಯಾಯಮೂರ್ತಿ ಬಿ.ಆರ್.‌ಗವಾಯಿ ಅವರ‌ ಮೇಲೆ‌ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ್ದನ್ನು ಖಂಡಿಸಿ ನಗರದಲ್ಲಿ ವಿವಿಧ ದಲಿತ‌ಪರ‌ ಸಂಘಟನೆಗಳು ಸೋಮವಾರ ಸಂಜೆ ದಿಢೀರ್‌ ಪ್ರತಿಭಟನೆ ನಡೆಸಿದವು.

'ಕೋಮುವಾದಿಗಳಿಗೆ ಧಿಕ್ಕಾರ’, ‘ಜಾತಿವಾದಿಗಳಿಗೆ ಧಿಕ್ಕಾರ’ ಎಂದು‌ ಪ್ರತಿಭಟನಕಾರರು ಘೋಷಣೆ ಕೂಗಿದರು. ‘ಶೂ’ ಎಸೆದ ವಕೀಲನ ಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ‌ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಲಬುರಗಿ ‌ತಾಲ್ಲೂಕು‌ ಪ‌ಂಚಾಯಿತಿಯಿಂದ ಜಿಲ್ಲಾಧಿಕಾರಿ‌ ಕಚೇರಿ ತನಕ‌ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ 10 ನಿಮಿಷ‌ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ‌ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಿ.ಜಿ.ಸಾಗರ ಮಾತನಾಡಿ, ಸುಪ್ರೀಂಕೋರ್ಟ್‌ನಲ್ಲೇ ಮುಖ್ಯ ನ್ಯಾಯಮೂರ್ತಿ ವಿರುದ್ಧ ಶೂ‌ ಎಸೆದ‌ ಕೃತ್ಯ ಖಂಡನೀಯ. ಇದು ಸಂವಿಧಾನ,‌ ದೇಶ ಹಾಗೂ‌ ನ್ಯಾಯಾಲಯಕ್ಕೆ‌ ಮಾಡಿದ ಅವಮಾನವಾಗಿದೆ. ಈ‌ ಕೃತ್ಯದ ಹಿಂದೆ ಯಾರೆಲ್ಲರ‌ ಕೈವಾಡವಿದೆ ಎಂಬುದನ್ನು‌ ಪತ್ತೆ ಮಾಡಿ, ಆರೋಪಿ ಸಹಿತ ‌ಎಲ್ಲರಿಗೂ ಕಠಿಣ ‌ಶಿಕ್ಷೆ‌ ವಿಧಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಸುರೇಶ ಹಾದಿಮನಿ, ಬಿ.ಸಿ.ವಾಲಿ, ಎಸ್.ಪಿ.ಸುಳ್ಳದ, ಅಂಬಣ್ಣ ಜೀವಣಗಿ, ಎಚ್‌. ಶಂಕರ್ ಸೇರಿದಂತೆ ಹಲವರರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ರಿಪಬ್ಲಿಕನ್‌ ಯೂತ್‌ ಫೆಡರೇಷನ್‌ ಕಾರ್ಯಕರ್ತರು ಕೂಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮುಖಂಡರಾದ ಹನುಮಂತ ಇಟಗಿ, ಸಂತೋಷ ಮೇಲ್ಮನಿ, ಸಿದ್ದು ಬೆಳಸೂರ, ಶಿವಕುಮಾರ, ರಾಘವೇಂದ್ರ ವಾಳಿಕಾರ ಸೇರಿದಂತೆ ಹಲವರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News