ಕಲಬುರಗಿ | ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ಕ್ರಮಕ್ಕೆ ಆಗ್ರಹ
ಕಲಬುರಗಿ : ಕರ್ನಲ್ ಸೋಫಿಯಾ ಖುರೇಷಿ ಕುರಿತು ಮಧ್ಯಪ್ರದೇಶ ಬಿಜೆಪಿ ನಾಯಕ ಹಾಗೂ ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡಿಸಿ ತಕ್ಷಣ ಅವರನ್ನು ವಜಾಗೊಳಿಸಿ, ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಮಧ್ಯಪ್ರದೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಬಿಜೆಪಿ ನಾಯಕ ವಿಜಯ್ ಶಾ, ಪ್ರಧಾನಿ ಮೋದಿ ಅವರನ್ನು ಹೊಗಳುವ ಭರದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು 'ಭಯೋತ್ಪಾದಕರ ಸಹೋದರಿ' ಎಂದು ಕರೆದಿದ್ದರು.
ರಾಷ್ಟ್ರದ ರಕ್ಷಣೆಗಾಗಿ ಪ್ರಾಣ ಒತ್ತೆಯಿಟ್ಟು ಹೋರಾಡುವ ವೀರಯೋಧರ ಬಗ್ಗೆ ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವರನ್ನು ತಕ್ಷಣ ವಜಾಗೊಳಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಒಳಪಡಿಸಬೇಕೆಂದು ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ನಜಮುಲ್ ಇಸ್ಲಾಮ್ ಅಹೆಮರ್, ಲಾಲ್ ಅಹ್ಮದ್ ಬಾಂಬೆ ಸೇಠ್, ಜಸವೀರ್ ಸೀಮಗ್ ಛಾಬ್ರಾ, ನಿಮಿನಾಥ ಜೈನ್, ಸಂಧ್ಯರಾಜ್ ಸೈಮುಲ್, ಇಮ್ರಾನ್ ರಝ್ವಿ, ಅಥರ್ ಪರ್ವಿನ್ ನಡಗೌಡ, ಮುಹಮ್ಮದ್ ಸುಫಿಯಾನ್ ಅಹ್ಮದ್ ಸೇರಿದಂತೆ ಹಲವರು ಇದ್ದರು.