Kalaburagi | ಪಿಯು ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಅಗತ್ಯ: ಸುರೇಶ ಅಕ್ಕಣ್ಣ
ಕಲಬುರಗಿ : ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಇದೆ. ಅವುಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ ಶೈಕ್ಷಣಿಕ ಫಲಿತಾಂಶಗಳನ್ನು ಇನ್ನಷ್ಟು ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿಕಟಪೂರ್ವ ಉಪನಿರ್ದೇಶಕ ಸುರೇಶ ಅಕ್ಕಣ್ಣ ಹೇಳಿದರು.
ನಗರದ ಸೆಂಟ್ ಮೇರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
32 ವರ್ಷಗಳ ಸರ್ಕಾರಿ ಸೇವೆಯಲ್ಲಿ ಉಪನ್ಯಾಸಕ, ಪ್ರಾಚಾರ್ಯ ಹಾಗೂ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವುದು ತಮಗೆ ಅಪಾರ ಸಂತೃಪ್ತಿ ತಂದಿದೆ ಎಂದು ತಿಳಿಸಿದ ಅವರು, ನಿಂಬರ್ಗಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ, ಅದೇ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿ ವಯೋನಿವೃತ್ತಿ ಹೊಂದಿರುವುದು ಜೀವನದ ವಿಶೇಷ ಕಾಕತಾಳೀಯವಾಗಿದೆ ಎಂದು ಹೇಳಿದರು.
ಈ ವರ್ಷದ ಪಿಯುಸಿ ಫಲಿತಾಂಶ ತಮಗೆ ವೈಯಕ್ತಿಕ ತೃಪ್ತಿ ನೀಡಿದ್ದು, ವಿಶೇಷವಾಗಿ ವಿದ್ಯಾರ್ಥಿನಿ ಸೃಷ್ಟಿ ಪಾಟೀಲ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವುದು ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಶೈಕ್ಷಣಿಕ ವಾತಾವರಣವನ್ನು ಮತ್ತಷ್ಟು ಬಲಪಡಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಫಾದರ್ ಜೋಸೆಫ್ ಪ್ರವೀಣ ಉದ್ಘಾಟಿಸಿದರು. ಪ್ರಾಚಾರ್ಯರ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ಖಜೂರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೇವಣಗೌಡ ಪಾಟೀಲ, ಡಾ. ಶರಣಗೌಡ ಪಾಟೀಲ, ನರಸಪ್ಪ ರಂಗೋಲಿ, ಧರ್ಮರಾಜ ಜವಳಿ ಹಾಗೂ ಸವಿತಾ ಬಿ. ನಾಸಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಹಾಗೂ ಕಾರ್ಯಕ್ರಮದಲ್ಲಿ ನಾಗರಾಜ ಮೈಲ್ವಾರ, ಪಾಂಡು ಎಲ್. ರಾಠೋಡ, ಶರಣು ಓಂಕಾರ, ಎನ್.ಆರ್. ಕುಲಕರ್ಣಿ, ಸಿದ್ದಲಿಂಗ ಪೂಜಾರಿ, ಜೆ. ಮಲ್ಲಪ್ಪ, ರಾಜು, ಗಂಗಾಧರ, ಉಮೇಶ ಅಷ್ಟಗಿ, ದಶರಥ ರಾಠೋಡ, ಮಹಾದೇವ ನಲಕಂಠೆ, ಚಂದ್ರಕಾಂತ ಸನಾದಿ, ಮಾಪ್ಪಣ್ಣ ಜಿರೋಳಿ, ಡಾ. ಪ್ರಹ್ಲಾದ್ ಬುರಲಿ, ರಮೇಶ ಮಾಡಿಯಾಳಕರ, ರವೀಂದ್ರ ಸಜ್ಜಿ, ವಿಜಯಕುಮಾರ ರೋಣದ, ಭರತೇಶ ಬಳುಂಡಗಿ, ಹಣಮಂತರಾಯ ಪಾಟೀಲ, ಸುಜಾತಾ ಬೀರಾದಾರ, ಪ್ರಭಾವತಿ ಪಾಟೀಲ, ಶಾಂತಾ ಮಾಲಿ ಪಾಟೀಲ್, ಸವಿತಾ ನಾಟೀಕಾರ, ಸೇಲ್ವಿ ದೇಶಮಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಗುಂಡಯ್ಯ ಸ್ವಾಮಿ ಸ್ವಾಗತಿಸಿದರು. ಡಾ. ಭೀಮರಾಯ ಅರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಭಗವಂತರಾಯ ಬಳುಂಡಗಿ ನಿರೂಪಿಸಿದರು. ಶಂಕರ ರೆಡ್ಡಿ ವಂದಿಸಿದರು.