Kalaburagi | ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರ ವಹಿಸಿ: ಡಾ.ಫಾರೂಕ್ ಮಣ್ಣೂರ
ಶಹಾಬಾದ್ನಲ್ಲಿ ಎಸ್ಐಆರ್ ಜಾಗೃತಿ ಸಭೆ; ಅರ್ಜಿ ಸ್ವತಃ ಪರಿಶೀಲಿಸಿ ಸಲ್ಲಿಸುವಂತೆ ಸಲಹೆ
ಕಲಬುರಗಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಪೂರ್ಣಗೊಳಿಸಿ, ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸಮಾಜ ಸೇವಕ ಡಾ.ಫಾರೂಕ್ ಮಣ್ಣೂರ ಕರೆ ನೀಡಿದರು.
ಶಹಾಬಾದ್ ಪಟ್ಟಣದ ಜಾಮಿಯಾ ಮಸ್ಜಿದ್ನಲ್ಲಿ ಆಯೋಜಿಸಿದ್ದ ಎಸ್ಐಆರ್ ಜಾಗೃತಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ, ಎಸ್ಐಆರ್ ಅರ್ಜಿ ಭರ್ತಿ ವಿಧಾನ, ಅಗತ್ಯ ದಾಖಲೆಗಳು ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು.
ತಮ್ಮ ಹೆಸರಿನ ಜೊತೆಗೆ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಯಾವುದೇ ಅರ್ಹ ಮತದಾರರ ಹೆಸರು ಅನಗತ್ಯವಾಗಿ ಕೈಬಿಡದಂತೆ ಎಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.
ಎಸ್ಐಆರ್ ಅರ್ಜಿ ಭರ್ತಿ ಮಾಡುವ ಜವಾಬ್ದಾರಿಯನ್ನು ಇತರರ ಮೇಲೆ ಹಾಕದೆ ಸ್ವತಃ ಪರಿಶೀಲಿಸಿ ಸಲ್ಲಿಸಬೇಕು. ಹೆಸರು, ಜನ್ಮ ದಿನಾಂಕ, ವಿಳಾಸ ಹಾಗೂ ಕುಟುಂಬದ ವಿವರಗಳಲ್ಲಿ ತಪ್ಪುಗಳಿದ್ದರೆ ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಈ ಹಿಂದೆ ಜಾಗೃತಿಯ ಕೊರತೆ ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಅನೇಕ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿವೆ ಎಂದು ಉಲ್ಲೇಖಿಸಿದ ಅವರು, ಪ್ರಾತ್ಯಕ್ಷಿಕೆಯ ಮೂಲಕ ಎಸ್ಐಆರ್ ಅರ್ಜಿ ಭರ್ತಿ ಮಾಡುವ ವಿಧಾನವನ್ನು ವಿವರಿಸಿದರು.
ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ ಅವರು, ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಅದನ್ನು ಕಾಪಾಡಿಕೊಳ್ಳಲು ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಫೀಝ್ ಅಲ್ತಾಫ ಮೌಲಾನಾ, ಬೈತೂಲ್ ಮಾಲ್ ಜಿಲ್ಲಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸಾಬ್, ನಿವೃತ ತಹಶೀಲ್ದಾರ್ ನಿಸಾರ್ ವಜೀರ್, ಜನಾಬ್ ಹಿದಾಯತ್ , ಅಫಜಲ್ ಮಹೆಮೂದ್, ಫೈರೋಝ್ ಖಾನ್ ವಾಡಿ, ರಫೀಕ್ ಬಾಗವಾನ, ಶಮಶೋದ್ದಿನ ಮೌಲಾನಾ , ಅಬ್ದುಲ ಖದಿರ್ ಸಾಬ್., ಅಬ್ದುಲ್ ಅಫಸರ್ ಸೇಠ, ಮುನಾಫ ಸಾಹೆಬ್, ಅಬ್ದುಲ್ ರಬ್ ಇಂಗಳಗಿ, ಜಹೀರ್ ಅಹ್ಮದ್, ನಿಸಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.