Chincholi | ಎಸ್ಐಆರ್ ಹೆಸರಿನಲ್ಲಿ ಮತದಾರರ ಹಕ್ಕಿಗೆ ಧಕ್ಕೆ ಒಪ್ಪುವುದಿಲ್ಲ : ಸುಭಾಷ್ ರಾಠೋಡ್
ಚಿಂಚೋಳಿ : ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧಿಯಲ್ಲ. ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಕ್ರಮಗಳು ಮತದಾರರ ಹಕ್ಕಿಗೆ ಧಕ್ಕೆ ತರುವಂತಿದ್ದು, ಇಂತಹ ಕ್ರಮಗಳಿಗೆ ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಚಿಂಚೋಳಿ ವತಿಯಿಂದ ಚಿಂಚೋಳಿ, ಚಂದಾಪುರ ಪುರಸಭೆ, ವೆಂಟಕಪೂರ, ಕುಂಚಾವರಂ, ಶಾದಿಪುರ, ಮಿರಿಯಾಣ, ಪೋಲಕಪಳ್ಳಿ, ಅಣವಾರ, ಚಿಮ್ಮಾ ಇದಲಾಯಿ, ಐನೋಳಿ ಹಾಗೂ ಗಾರಂಪಳ್ಳಿ ಭಾಗಗಳ ಬೂತ್ ಮಟ್ಟದ ಏಜೆಂಟರಿಗೆ (ಬಿಎಲ್ಎ) ಆಯೋಜಿಸಿದ್ದ ಎಸ್ಐಆರ್ ಜನಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಯೊಂದಿಗೆ ಪರಿಶೀಲಿಸುವ ಪ್ರಕ್ರಿಯೆಯೇ ಎಸ್ಐಆರ್ ಆಗಿದೆ. ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವ ಉದ್ದೇಶವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ, ಇದೇ ನೆಪದಲ್ಲಿ ದೇಶದ ಮೂಲ ನಿವಾಸಿಗಳು, ಬುಡಕಟ್ಟು ಸಮುದಾಯ, ಅಲ್ಪಸಂಖ್ಯಾತರು ಹಾಗೂ ಬಡವರ ಮತದಾನದ ಹಕ್ಕಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಪ್ರಕ್ರಿಯೆ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.
ಬಿಎಲ್ಎ ಹುದ್ದೆಯು ಯಾವುದೇ ರಾಜಕೀಯ ಪಕ್ಷ ನೀಡುವ ಹುದ್ದೆಯಲ್ಲ. ಅದು ಚುನಾವಣಾ ಪ್ರಕ್ರಿಯೆಯಲ್ಲಿ ಸಂವಿಧಾನಾತ್ಮಕವಾಗಿ ಮಾನ್ಯತೆ ಪಡೆದ ಜವಾಬ್ದಾರಿಯಾಗಿದ್ದು, ಎಸ್ಐಆರ್ ಪ್ರಕ್ರಿಯೆ ನಡೆಯುವ 25 ದಿನಗಳ ಅವಧಿಯಲ್ಲಿ ಬಿಎಲ್ಎಗಳು ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಬಿಎಲ್ಒಗಳೊಂದಿಗೆ ಸಮನ್ವಯ ಸಾಧಿಸಿ ಮನೆಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಮಾಹಿತಿ ದಾಖಲಿಸುವಲ್ಲಿ ಯಾವುದೇ ತಪ್ಪು ಕಂಡುಬಂದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಬಿಎಲ್ಎಗಳ ಮೇಲಿದೆ ಎಂದು ಹೇಳಿದರು.
ಪ್ರತಿ ಅರ್ಜಿಯ ಒಂದು ಪ್ರತಿಯನ್ನು ಬಿಎಲ್ಎ ಹಾಗೂ ಮತ್ತೊಂದು ಪ್ರತಿಯನ್ನು ಬಿಎಲ್ಒ ಬಳಿ ಇರಿಸಬೇಕು. ಒಂದೇ ವ್ಯಕ್ತಿಯ ಹೆಸರು ಎರಡು ಅಥವಾ ಹೆಚ್ಚಿನ ಸ್ಥಳಗಳಲ್ಲಿ ಇದ್ದರೆ ನಿಯಮಾನುಸಾರ ಹೆಚ್ಚುವರಿ ಹೆಸರನ್ನು ತೆಗೆದುಹಾಕಬೇಕು. ಉದ್ಯೋಗಕ್ಕಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ನೆಲೆಸಿರುವ ಚಿಂಚೋಳಿ ಕ್ಷೇತ್ರದ ಮತದಾರರನ್ನು ಸಂಪರ್ಕಿಸಿ, ಅವರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ನೆರವು ನೀಡುವುದು ಬಿಎಲ್ಎಗಳ ಪ್ರಮುಖ ಕರ್ತವ್ಯವಾಗಿದೆ. ಎಸ್ಐಆರ್ ಕುರಿತು ಜನರಲ್ಲಿ ಇರುವ ಗೊಂದಲಗಳನ್ನು ನಿವಾರಿಸಿ, ಎಲ್ಲ ಅರ್ಹ ನಾಗರಿಕರ ಮತದಾನದ ಹಕ್ಕು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅನೀಲಕುಮಾರ ಜಾಮದಾರ, ಮಹಿಮೂದ್ ಪಟೇಲ್, ಆನಂದ್ ಟೈಗರ್, ಬಸವರಾಜ ಮಲಿ, ಅಜೀತ್ ಪಾಟೀಲ್, ಆರ್. ಗಣಪತರಾವ್, ನರಸಿಂಲು, ಲಕ್ಷ್ಮಣ ಅವಂಟಿ, ಅಬ್ದುಲ್ ಬಾಸಿತ್, ರಾಘವೇಂದ್ರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಬಿಎಲ್ಎಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.