×
Ad

Kalaburagi | ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ: 12 ಆರೋಪಿಗಳ ಬಂಧನ

15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು, ಬೊಲೆರೊ ವಾಹನ, ಜಾನುವಾರುಗಳ ವಶ

Update: 2026-07-16 19:49 IST

ಕಲಬುರಗಿ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ, ದನಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಕಲಬುರಗಿ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 12 ಮಂದಿ ಅಂತರರಾಜ್ಯ ಹಾಗೂ ಸ್ಥಳೀಯ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು, ಬೊಲೆರೊ ವಾಹನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ಉಪವಿಭಾಗದ ಡಿವೈಎಸ್‌ಪಿ ತಮ್ಮರಾಯ ಪಾಟೀಲ ಅವರ ನೇತೃತ್ವದ ವಿಶೇಷ ಅಪರಾಧ ತನಿಖಾ ತಂಡಗಳು ವಿವಿಧ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿವೆ ಎಂದು ಹೇಳಿದರು.

ನಿಂಬರ್ಗಾ ಠಾಣೆ: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಮಹಾರಾಷ್ಟ್ರದ ಸೋಲಾಪುರ ಮೂಲದ ಸಿದ್ದಪ್ಪ ಕಾಳೆ ಹಾಗೂ ಗೋವಿಂದ ಭೋಸಲೆ ಬಂಧಿತರಾಗಿದ್ದಾರೆ. ಇವರಿಂದ 10 ಗ್ರಾಂ ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಆಸೀಫ್ ಖುರೇಷಿ ಮತ್ತು ತೌಫಿಕ್ ಅವರನ್ನು ಬಂಧಿಸಿ, 1.40 ಲಕ್ಷ ರೂ. ನಗದು ಹಾಗೂ ದನ ಕಳವೆಗೆ ಬಳಸುತ್ತಿದ್ದ ಸುಮಾರು 4.50 ಲಕ್ಷ ರೂ. ಮೌಲ್ಯದ ಬೊಲೆರೊ ಪಿಕಪ್ ವಾಹನವನ್ನು ಜಪ್ತಿ ಮಾಡಲಾಗಿದೆ.

ಅಫಜಲಪುರ ಠಾಣೆ: ರೈತರ ಕೊಟ್ಟಿಗೆಗಳಿಂದ ಜಾನುವಾರುಗಳನ್ನು ಕಳವು ಮಾಡಿ ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಿದ್ದ ಖಾಜಪ್ಪ ಮೂಕನೂರ, ರಮೇಶ ಬುರಾಣಪುರೆ, ಮಹೀಬೂಬ ದೊಡ್ಡೆನವರ, ಮಲ್ಲಿಕಾರ್ಜುನ ತಳವಾರ ಹಾಗೂ ಶಶಿಕುಮಾರ ತಳವಾರರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನಾಲ್ಕು ಖಿಲಾರಿ ಹೋರಿಗಳು, ಮೂರು ಎತ್ತುಗಳು, ಜರ್ಸಿ ಆಕಳುಗಳು ಹಾಗೂ ಮಾರಾಟದಿಂದ ಪಡೆದ ಹಣ ಸೇರಿ ಒಟ್ಟು 8.15 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ದೇವಲ ಗಾಣಗಾಪುರ ಠಾಣೆ: ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಭಕ್ತರಂತೆ ಬಂದು ಮಹಿಳೆಯರ ಚಿನ್ನದ ಸರಗಳನ್ನು ಕಳವು ಮಾಡುತ್ತಿದ್ದ ಸೋಲಾಪುರದ ಭಗತ್‌ಸಿಂಗ್ ಸಾಳುಂಕೆ, ಬಾದಲ್ ಸಾಳುಂಕೆ ಹಾಗೂ ಅಭಿಮನ್ ಡಾಂಗೆ ಬಂಧಿತರಾಗಿದ್ದಾರೆ. ಆರೋಪಿಗಳಿಂದ ಸುಮಾರು 40 ಗ್ರಾಂ ತೂಕದ ಚಿನ್ನದ ತಾಳಿ ಸರ, ತಾಳಿಗುಂಡು ಹಾಗೂ ಬೋರಮಾಳಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್,ಡಿವೈಎಸ್‌ಪಿ ತಮ್ಮರಾಯ ಪಾಟೀಲ, ಸಿಪಿಐಗಳಾದ ಜಗದೀಶ ಕೆ.ಜಿ., ಲಖನ್ ಆರ್. ಮಸಗುಪ್ಪಿ ಹಾಗೂ ಪಿಎಸ್‌ಐಗಳಾದ ಇಂದುಮತಿ, ಸಂಗೀತಾ ಶಿಂಧೆ, ವಾತ್ಸಲ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News