ಕಲಬುರಗಿ | ಪ್ರಿಯಕರನ ಜೊತೆಗೂಡಿ ಗಂಡನನ್ನೇ ಹತ್ಯೆಗೈದ ಪತ್ನಿ
ತಿಪ್ಪಣ್ಣ ಅಲಿಯಾಸ್ ಕುಪೇಂದ್ರ (30)
ಕಲಬುರಗಿ : ಗೃಹಿಣಿಯೊಬ್ಬಳು ಪ್ರಿಯಕರನ ಜೊತೆಗೂಡಿ ತನ್ನ ಪತಿಯನ್ನೇ ಹತ್ಯೆ ಮಾಡಿರುವಂತಹ ಘಟನೆ ಶುಕ್ರವಾರ ಬೆಳಗಿನಜಾವ ಚಿತ್ತಾಪುರ ತಾಲೂಕಿನ ಭಾಗೋಡಿ ಗ್ರಾಮದಲ್ಲಿ ನಡೆದಿದೆ.
ತಿಪ್ಪಣ್ಣ ಅಲಿಯಾಸ್ ಕುಪೇಂದ್ರ (30) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದೆಂದು ಶಾಂತಮ್ಮ ಮತ್ತು ಆಕೆಯ ಪ್ರಿಯಕರ ಸೇರಿ, ಕುಪೇಂದ್ರ ಎನ್ನುವವರನ್ನು ತಲೆದಿಂಬಿನಿಂದ ಉಸಿರು ಗಟ್ಟಿಸಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಶಾಂತಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಿಯಕರ ಪರಾರಿಯಾಗಿದ್ದು, ಆತನನ್ನು ಕೂಡಲೇ ಬಂಧಿಸಲಾಗುವುದು ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ಮಾಹಿತಿ ನೀಡಿದ್ದಾರೆ.
ತಲೆದಿಂಬಿನಿಂದ ಮುಖವನ್ನು ಮುಚ್ಚಿ ಉಸಿರು ಗಟ್ಟಿಸುತ್ತಿರುವಾಗ ಕುಪೇಂದ್ರ ಜೋರಾಗಿ ಕಿರುಚಿದ್ದಾರೆ. ಅಕ್ಕ ಪಕ್ಕದವರು ಏನಾಗಿದೆ ಎಂದು ಮನೆಯ ಬಾಗಿಲು ಬಡಿದಾಗ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ಕೂಡಲೇ 112ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದಾಗ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ಚಿತ್ತಾಪುರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ನಟರಾಜ ಲಾಡೆ, ಚಂದ್ರಶೇಖರ ತಿಗಡಿ, ಎಎಸ್ಐ ಲಾಲಹ್ಮದ್, ಸಿಬ್ಬಂದಿಗಳಾದ ದತ್ತು ಜಾನೆ, ರವಿಕುಮಾರ, ಸವಿಕುಮಾರ, ಅನೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.