ಕಲಬುರಗಿ | ಹಾವೇರಿ ನಗರಸಭೆಯ ಪೌರ ಕಾರ್ಮಿಕನ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ
ಕಲಬುರಗಿ: ಹಾವೇರಿ ನಗರ ಸಭೆಯ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.
ಹಾವೇರಿ ನಗರ ಸಭೆಯಲ್ಲಿ ಅಧಿಕಾರಿಗಳ ಮೌಖಿಕ ಆದೇಶದ ಮೇರೆ ಬ್ಯಾನರ್ ತೆರವುಗೊಳಿಸಿದ ಪೌರ ಕಾರ್ಮಿಕನ ಮೇಲೆ ದುಷ್ಕರ್ಮಿಗಳ ಗುಂಪೊಂಡು ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಮುನಸಿಪಲ್ ಕಾರ್ಮಿಕರ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.
ದಾಳಿ ನಡೆಸಿರುವ ಘಟನೆಯ ಬಗ್ಗೆ ತಕ್ಷಣದಲ್ಲಿ ಸಮಗ್ರ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಗೌರವ ಸಂಚಾಲಕಿ ಕೆ.ನೀಲಾ, ಸಂಚಾಲಕ ಲೋಹಿತ್, ಚಂದಮ್ಮ, ಕಮಲಾಬಾಯಿ, ಈರಪ್ಪ, ನಾಗಮ್ಮ, ಪಾಂಡುರಂಗ ಮಾವಿನಕರ್, ಕವಿತಾ, ನಾಗಯ್ಯ ಸ್ವಾಮಿ, ಲವಿತ್ರ ವಸ್ತ್ರದ್, ಸುಜಾತಾ ಸೇರಿದಂತೆ ಇನ್ನಿತರರು ಇದ್ದರು.