Kalaburagi | ‘ಪುಷ್ಪ ಮಂಜರಿ’ ಕವನ ಸಂಕಲನ ಲೋಕಾರ್ಪಣೆ
ಸಾಹಿತ್ಯವು ಸಮಾಜದ ಸ್ಪಂದನೆ, ಜೀವನ ಮೌಲ್ಯಗಳ ಪ್ರತಿಬಿಂಬ: ಡಾ. ಶೈಲಜಾ ಕೊಪ್ಪರ
ಕಲಬುರಗಿ: ಸಾಹಿತ್ಯವು ಸಮಾಜದ ವಾಸ್ತವತೆ, ಜೀವನ ಮೌಲ್ಯಗಳು ಹಾಗೂ ಮಾನವೀಯ ಅನುಭವಗಳ ಪ್ರತಿಬಿಂಬವಾಗಿದ್ದು, ಕಾವ್ಯ ನಮ್ಮೊಳಗಿನ ಚಿಂತನೆ ಮತ್ತು ಸಂವೇದನೆಗಳನ್ನು ಜಾಗೃತಗೊಳಿಸುವ ಶಕ್ತಿಯಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಶೈಲಜಾ ಕೊಪ್ಪರ ಹೇಳಿದರು.
ನಗರದ ವಿಶ್ವರಾಧ್ಯ ಕಾಲೊನಿಯ ವಿಶ್ವಾಂಜನೆಯ ದೇವಸ್ಥಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಪುಷ್ಪ ಮಂಜರಿ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಿರುಪಮ ಗುರುರಾಜ ಹಾಗೂ ಡಾ. ಅಂಬುಜಾ ಮಳಖೇಡ್ಕರ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಈ ಸಂಕಲನದಲ್ಲಿ ವಿವಿಧ ಕವಯಿತ್ರಿಯರ ಅನುಭವಸಮೃದ್ಧ ಕವಿತೆಗಳು ಅಡಕವಾಗಿವೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಮಹಿಳೆಯರ ಬದುಕಿನ ಹೋರಾಟ, ಸಾಮಾಜಿಕ ಸಮಸ್ಯೆಗಳು ಹಾಗೂ ಭಕ್ತಿ ಪ್ರಧಾನ ವಿಚಾರಗಳು ಕೃತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ ಎಂದು ತಿಳಿಸಿದರು.
ಮೊಬೈಲ್ ಸಂಸ್ಕೃತಿಯ ಪ್ರಭಾವ, ಮಹಿಳೆಯರ ದೈನಂದಿನ ಸವಾಲುಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಕುರಿತ ಕವಿತೆಗಳು ಓದುಗರಲ್ಲಿ ಚಿಂತನೆ ಮೂಡಿಸುವಂತಿವೆ ಎಂದು ಅಭಿಪ್ರಾಯಪಟ್ಟರು.
ದಾಸ ಸಾಹಿತ್ಯದ ಮಹತ್ವವನ್ನು ಉಲ್ಲೇಖಿಸಿದ ಅವರು, ದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದು, ಮಾನವೀಯ ಮೌಲ್ಯಗಳು, ಪ್ರೀತಿ, ಸಹಾನುಭೂತಿ ಮತ್ತು ಸಾತ್ವಿಕ ಬದುಕಿನ ಸಂದೇಶವನ್ನು ಸಾರಿದ್ದಾರೆ ಎಂದರು.
ಪುರಂದರದಾಸರು ಹಾಗೂ ಕನಕದಾಸರು ಸಮಾನತೆ, ಸೌಹಾರ್ದತೆ ಮತ್ತು ನೈತಿಕ ಬದುಕಿನ ಮಾರ್ಗವನ್ನು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ತೋರಿಸಿದ್ದಾರೆ. “ಆಚಾರವಿಲ್ಲದ ನಾಲಿಗೆ” ಹಾಗೂ “ಕುಲಕುಲವೆಂದು ಹೊಡೆದಾಡದಿರಿ” ಎಂಬ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಠ್ಠಲರಾವ ಕುಲಕರ್ಣಿ ಮಾತನಾಡಿ, ಮಹಿಳೆಯರು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದು, ಮಹಿಳೆ ಅಬಲೆ ಅಲ್ಲ, ಸಬಲೆ ಎಂಬುದನ್ನು ತಮ್ಮ ಪ್ರತಿಭೆಯ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ಇದೇ ವೇಳೆ ಡಾ. ಅಂಬುಜಾ ಮಳಖೇಡ್ಕರ್ ಅವರ ಸಾಹಿತ್ಯ ಸೇವೆಯನ್ನು ಪ್ರಶಂಸಿಸಲಾಯಿತು.
ದೇವಸ್ಥಾನದ ಉಪಾಧ್ಯಕ್ಷ ಶರಣಗೌಡ ಪಾಟೀಲ ಉಪಸ್ಥಿತರಿದ್ದರು. ನಿರುಪಮ ಗುರುರಾಜ ಕೃತಿಯ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಅಂಗವಾಗಿ ನಡೆದ ಮಕ್ಕಳ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಶಿಲ್ಪಾ ಸುಧೀಂದ್ರ ದಾಸ ಹಾಗೂ ಡಾ.ಪ್ರತಿಭಾ ಗುಡದೂರು ಕವನ ವಾಚನ ನಡೆಸಿದರು.
ವೈಷ್ಣವಿ ವಂದನಾರ್ಪಣೆ ಮಾಡಿದರು. ಸಾಹಿತ್ಯಾಸಕ್ತರು, ಕವಯಿತ್ರಿಯರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿಯ ಯಶಸ್ಸಿಗೆ ಶುಭ ಹಾರೈಸಿದರು.