×
Ad

ಕಲಬುರಗಿ | ದೇವಲ ಗಾಣಗಾಪೂರ ಅಭಿವೃದ್ಧಿಗೆ 200 ಕೋಟಿ ರೂ. ಮೊತ್ತದ ಯೋಜನೆ ಸಿದ್ಧ: ಬಿ.ಫೌಝಿಯಾ ತರನ್ನುಮ್

Update: 2025-05-03 20:57 IST

ಕಲಬುರಗಿ : ಅಫಜಲಪೂರ ತಾಲೂಕಿನ ಸುಪ್ರಸಿದ್ದ ದೇವಲ ಗಾಣಗಾಪೂರದ ಶ್ರೀ ದತ್ತಾತ್ರೇಯ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರವಾಗಿರುವ ದೇವಲ ಗಾಣಗಾಪೂರವನ್ನು ಕಾಶಿ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂ. ಮೊತ್ತದ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.

ದೇವಲ ಗಾಣಗಾಪೂರ ಪಟ್ಟಣದಲ್ಲಿ ನಾಲ್ಕು ಲೇನ್ ರಸ್ತೆ, ಸಂಗಮ ಮತ್ತು ಅಷ್ಠ ತೀರ್ಥ ಸ್ಥಳಗಳ ಅಭಿವೃದ್ಧಿ, ಒಳಚರಂಡಿ, ಎಸ್.ಟಿ.ಪಿ ಘಟಕ ಸ್ಥಾಪನೆ, ನಾಗರಿಕ ಸೌಲಭ್ಯಗಳು ಸೇರಿದಂತೆ ಒಟ್ಟಾರೆ ದೇವಸ್ಥಾನ ಮತ್ತು ಪಟ್ಟಣದ ಸೌಂದರ್ಯೀಕರಣ ಹೆಚ್ಚಿಸಲು ಮತ್ತು ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದರು.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಪ್ರವರ್ಗ "ಎ" ಅಡಿಯಲ್ಲಿ ಬರುವ ಶ್ರೀ ದತ್ತಾತ್ರೇಯನ ಸನ್ನಿದಿಯ ದರ್ಶನಕ್ಕೆ ದೇಶದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುವುದರಿಂದ ಭಕ್ತರ ಅನುಕೂಲಕ್ಕೆ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ಸೂಚನಾ ಫಲಕಗಳು, ಶೂ ಸ್ಟ್ಯಾಂಡ್, ಸಿ.ಸಿ.ಟಿ.ವಿ., ಸಂಗಮ ಮತ್ತು ಅಷ್ಟ ತೀರ್ಥಗಳ ಅಭಿವೃದ್ಧಿ, ಡಸ್ಟ್ ಬಿನ್ ಅಳವಡಿಕೆ, ಪ್ರವಾಸಿ ಮಾಹಿತಿ ಕೇಂದ್ರ, ವಿವಿಧೋದ್ದೇಶ ಸಭಾಂಗಣ ನಿರ್ಮಾಣ ಹೀಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ “ಪ್ರಸಾದ” ಯೋಜನೆಯಡಿ ಸೇರ್ಪಡೆ ಮಾಡುವಂತೆ 83.52 ಕೋಟಿ ರೂ. ಮೊತ್ತದ ಪ್ರಸ್ತಾವನೆ ಈಗಾಗಲೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 2024ರ ಅಕೋಬರ್ 29 ರಂದೇ ಸಲ್ಲಿಸಿದ್ದು, ಅನುಮೋದನೆಯ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.

ಈ ಕುರಿತಂತೆ ರಾಜ್ಯದ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಈಗಾಗಲೆ 2-3 ಬಾರಿ ಬಾರಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವರನ್ನು ಕಂಡು ಗಾಣಗಾಪೂರ ಸಮಗ್ರ ಅಭಿವೃದ್ಧಿ ಕುರಿತಂತೆ ಮನವರಿಕೆ ಮಾಡಿ ಅನುದಾನ ಒದಗಿಸಲು ಕೋರಿದ್ದಾರೆ ಎಂದರು.

ಇತ್ತೀಚೆಗೆ ರಾಜ್ಯದ ಪ್ರಮುಖ 14 ದೇವಾಲಯಗಳ ಪ್ರಸಾದವನ್ನು ಆನ್‌ಲೈನ್ ಮೂಲಕ ಬುಕ್ ಮಾಡಿ ಪಡೆಯಲು “ಇ-ಪ್ರಸಾದ” ಸೇವೆ ಪ್ರಾರಂಭವಾಗಿದ್ದು, ಇದರಲ್ಲಿ ಗಾಣಗಾಪೂರದ ಶ್ರೀ ದತ್ತಾತ್ರೇಯನ ದೇವಸ್ಥಾನ ಒಳಗೊಂಡಿದೆ ಎಂದರು.

ವಾಕ್ ವೇ ನಿರ್ಮಾಣಕ್ಕೆ ಪ್ರಸ್ತಾವನೆ :

ದೇವಸ್ಥಾನದ ನಿಧಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ವಾಕ್ ವೇ ಕೆಲಸ ಪ್ರಗತಿಯಲ್ಲಿದೆ. ಶ್ರೀ ದತ್ತಾತ್ರೇಯ ದೇವಸ್ಥಾನ, ಶ್ರೀ ಸಂಗಮ, ಶ್ರೀ ಕಲ್ಲೇಶ್ವರ ದೇವಸ್ಥಾನ ಹಾಗೂ ಅಷ್ಟ ತೀರ್ಥಗಳಿಗೆ ತೆರಳುವ ಭಕ್ತಾದಿಗಳ ನೆರವಿಗಾಗಿ ವಿವಿಧ ಬ್ಯಾನರ್ ಮತ್ತು ಕಬ್ಬಿಣದ ಬೋರ್ಡ್ ತಯಾರಿಸಿ ನಾಮ ಫಲಕಗಳನ್ನು ಅಳವಡಿಸಲಾಗಿದೆ. ಶ್ರೀ ದತ್ತಾತ್ರೇಯನ ದರ್ಶನ ಕಿಂಡಿಯು ತುಂಬಾ ಕಿರಿದಾಗಿದ್ದು, ಇದನ್ನು ದೊಡ್ಡದಾಗಿ ನಿರ್ಮಿಸುವ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಿದೆ ಎಂದು ಬಿ.ಫೌಝಿಯಾ ತರನ್ನುಮ್ ತಿಳಿಸಿದರು.

ಕಲಬುರಗಿ ಜಿಲ್ಲೆಯ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ 1,630 ದೇವಾಲಯಗಳ ಪೈಕಿ 1,324 ದೇವಸ್ಥಾನಗಳ ಸರ್ವೆ ದಾಖಲೆಗಳನ್ನು ತಯಾರಿಸಲಾಗಿರುತ್ತದೆ. ಘತ್ತರಗಾ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದ ಅಭಿವೃದ್ಧಿಗೂ ಡಿ.ಪಿ.ಆರ್ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಜಿಲ್ಲಾಧಿಕಾರಿಗಳು, ಶ್ರೀ ದತ್ತಾತ್ರೇಯ ದೇವಸ್ಥಾನದ ಸಮಗ್ರ ಅಭಿವೃದ್ಧಿ, ಸ್ವಚ್ಛತೆ ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಹಲವಾರು ಕಾರ್ಯಕ್ರಮವನ್ನು ರೂಪಿಸಿದ್ದು, ಭಕ್ತಗಣ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನದಲ್ಲಿ ಸುಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News