×
Ad

ಕಲಬುರಗಿ | ಬುದ್ಧ, ಬಸವ, ಅಂಬೇಡ್ಕರ್ ದಾರಿಯಲ್ಲಿ ಬದುಕಿನ ಭವಿಷ್ಯವಿದೆ : ಜ್ಞಾನಪ್ರಕಾಶ ಸ್ವಾಮೀಜಿ

Update: 2025-05-16 16:08 IST

ಕಲಬುರಗಿ: ನಿನಗೆ ನೀನೆ ಬೆಳಕು ಎಂದು ಹೇಳಿದ ಬುದ್ಧ, ದಯವೇ ಧರ್ಮದ ಮೂಲ ಎಂದು ಹೇಳಿದ ಬಸವಣ್ಣ, ಶಿಕ್ಷಣ ವಿಮೋಚನೆಯ ಅಸ್ತ್ರವಾಗಬೇಕು ಎಂದು ಹೇಳಿದ ಡಾ.ಅಂಬೇಡ್ಕರ್ ಅವರ ವಿಚಾರಗಳು ನಮ್ಮ ಬದುಕಾಗಬೇಕು ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.

ನಗರದ ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಗ್ರೀನ್ ಪಾರ್ಕ್ ನಿವಾಸಿಗಳ ಸಂಘದ ಆಶ್ರಯದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ ಅವರ ಜಯಂತಿ ಆಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವಕಲ್ಯಾಣ ಬಸವ ಮಹಾಮನೆ ಟ್ರಸ್ಟ್ ನ ಬೆಲ್ದಾಳ ಸಿದ್ಧರಾಮ ಶರಣರು ಮಾತನಾಡಿ, ಭಾರತ ಇಂದು ತೀರಾ ಸಂದಿಗ್ದ ಪರಿಸ್ಥಿಯಲ್ಲಿದ್ದು, ಜಾತಿ, ಧರ್ಮದ ಹುಲುಬಿನಲ್ಲಿ ಸಿಕ್ಕು ಒದ್ದಾಡುತ್ತಿದ್ದೇವೆ. ಸಂವಿಧಾನ ತೆಗೆದು ಆ ಜಾಗದಲ್ಲಿ ಮನುಸ್ಮೃತಿ ಹೇರುವ ಹುನ್ನಾರ ನಡೆದಿದ್ದು, ಇದರಿಂದ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ ಕೊಡಿ. ಶಿಕ್ಷಣವೇ ಅಭಿವೃದ್ಧಿಯ ಬೇರು. ಮದ್ಯಪಾನ ಬೇರು ಸಮೇತ ಕಿತ್ತು ಹಾಕಬೇಕು. ಕೂಡಿ ಇರುವುದರಲ್ಲಿ ಶಕ್ತಿ ಇದೆ. ಸಮಾನತೆ, ಸ್ವಾತಂತ್ರ್ಯ, ಸಹೋದರತೆಯೇ ಧರ್ಮ ಎಂದು ಹೇಳಿದರು.

ಆಳಂದ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ, ಭಂತೆ ಧಮ್ಮ ರಾಮಗಿರಿ ನೇತೃತ್ವ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜೇಂದ್ರ ದೇಶಮುಖ ಸಮ್ಮುಖ ವಹಿಸಿದ್ದರು. ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಉದ್ಘಾಟಿಸಿದರು. ಪತ್ರಕರ್ತ ಡಾ.ಶಿವರಂಜನ ಸತ್ಯಂಪೇಟೆ, ಮಂಗಳಾ ವಿ.ಕಪರೆ ಹಾಗೂ ಡಾ.ಅನಿಲ ಟೆಂಗಳಿ ಮುಖ್ಯ ಭಾಷಣಕಾರರಾಗಿದ್ದರು.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಾಲಕೃಷ್ಣ ಕುಲಕರ್ಣಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹುಲೇಕರ್, ದಶವಂತ ಬಿ. ಕಣಮಸ್ಕರ್, ಚಂದ್ರಕಾಂತ ಗದ್ದಗಿ, ಕೆ.ಎಸ್. ಬಂಧು, ಸುರೇಶ ಬಡಿಗೇರ ವೇದಿಕೆಯಲ್ಲಿದ್ದರು. ಶಾಂತಪ್ಪ‌ ಸಂಗಾವಿ, ಶಂಕರ ಕೋಡ್ಲಾ, ಹಣಮಂತರಾಯ ಅಟ್ಟೂರ ಇತರರಿದ್ದರು. ಶಿವಕಾಂತ ಚಿಮ್ಮಾ ನಿರೂಪಿಸಿದರು. ವೀರೇಶ ಬೋಳಶೆಟ್ಟಿ ವಂದಿಸಿದರು.

ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಸತ್ಕರಿಸಲಾಯಿತು. ನೂರಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

ತ್ರಿಬಲ್ 'ಡಿ' ತ್ಯೇಜಿಸಿ' :

ಡಿಜೆ, ಡ್ಯಾನ್ಸ್, ಡ್ರಿಂಕ್ಸ್ ಇಲ್ಲದೆ ಜಯಂತಿ ಆಚರಿಸಬೇಕು. ಸಂವಿಧಾನದ ರಚನೆಯಿಂದ ವೋಟ್, ನೋಟು, ಸೀಟಿನ ಹಕ್ಕು ಬಂದಿತು. ಡಾ.ಅಂಬೇಡ್ಕರ್ ಋಣದ ಮಕ್ಕಳು ಭಾರತೀಯರು. ಬುದ್ಧ, ಬಸವ, ಅಂಬೇಡ್ಕರ್ ಈ ಮೂವರ ದಾರಿಯಲ್ಲಿ ಬದುಕು, ಭವಿಷ್ಯ, ದಾರಿ ಇದೆ. ದಾರ್ಶನಿಕರ ತತ್ವ ಪಾಲಿಸಿರಿ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News