ಕಲಬುರಗಿ: ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಿಂದ ಉಮ್ಮೀದ್ ಪೋರ್ಟಲ್ ನೊಂದಣಿ ಕೇಂದ್ರ ಉದ್ಘಾಟನೆ
ಕಲಬುರಗಿ: ಇಲ್ಲಿನ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸ್ಥಾಪಿಸಲಾದ ವಕ್ಫ್ ಆಸ್ತಿಗಳ ದತ್ತಾಂಶ ಶೇಖರಣೆ ಉಮ್ಮೀದ್ ಪೋರ್ಟಲ್ ನೊಂದಣಿ ಕೇಂದ್ರವನ್ನು ಹಝ್ರತ್ ಖಾಜಾ ಬಂದಾನವಾಜ್ನ ದರ್ಗಾದ ಸಜ್ಜಾದಾ ನಶೀನ್ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಹಝ್ರತ್ ಸಯ್ಯದ್ ಶಾ ಅಲಿ ಅಲ್ ಹುಸೇನಿ ಮಂಗಳವಾರ ಉದ್ಘಾಟಿಸಿದ್ದರು.
ಕಲಬುರಗಿಯಲ್ಲಿ 4,250 ವಕ್ಫ್ ಆಸ್ತಿಗಳ ದತ್ತಾಂಶವನ್ನು ಡಿಸೆಂಬರ್ 5, 2025 ರೊಳಗೆ ಉಮ್ಮೀದ್ ಪೋರ್ಟಲ್ಗೆ ಅಪ್ಲೋಡ್ ಮಾಡಲು ಈ ಲ್ಯಾಬ್ಗಳನ್ನು ಸ್ಥಾಪಿಸಲಾಗಿದೆ. ದತ್ತಾಂಶ ಅಪ್ಲೋಡ್ ಕಾರ್ಯ ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ನೊಂದಣಿ (Data Entry), ಎರಡನೇ ಹಂತದಲ್ಲಿ ಪರಿಶೀಲನೆ (Verification), ಮೂರನೇ ಹಂತದಲ್ಲಿ ಅನುಮೋದನೆ (Approval)
ರಾಜ್ಯದಾದ್ಯಂತ ಉಮ್ಮೀದ್ ವಕ್ಫ್ ಪೋರ್ಟಲ್ನಲ್ಲಿ ದತ್ತಾಂಶ ಅಪ್ಲೋಡ್ ಮಾಡುವ ಕಾರ್ಯ ಪ್ರಾರಂಭವಾಗಿದೆ. ಮಂಡಳಿ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಪ್ರತಿದಿನ ಪ್ರತಿ ಜಿಲ್ಲೆಯಿಂದ ಮಾಹಿತಿ ಪಡೆದು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲಾ ವಕ್ಫ್ ಆಸ್ತಿ ಮತ್ತು ಇದಾರಾಗಳ ವಿವರವನ್ನು ಕಡ್ಡಾಯವಾಗಿ ಉಮ್ಮೀದ್ ಪೋರ್ಟಲ್ ಅಪ್ ಲೋಡ್ ಮಾಡಬೇಕು. ಎಲ್ಲಾ ಜಿಲ್ಲೆಗಳ ಮುತ್ತವಲ್ಲಿ, ಮಸೀದಿ ಕಮಿಟಿ, ವಕ್ಫ್ ಸಂಸ್ಥೆಗಳು ಮತ್ತು ಎಲ್ಲಾ ಮಿಲ್ಲಿ ತನ್ಝಿಮೌನ್ (ಸಮುದಾಯ ಸಂಸ್ಥೆಗಳು) ಜಿಲ್ಲಾ ವಕ್ಫ್ ಅಧಿಕಾರಿಗೆ ಶೀಘ್ರವಾಗಿ ಸಂಪರ್ಕಿಸಿ ವಕ್ಫ್ ಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳ ವಿವರಗಳನ್ನು ಉಮ್ಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವಂತೆ ಮನವಿ ಮಾಡಿದರು.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ನ ಜಿಲ್ಲಾ ಸಂಚಾಲಕ ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್, ಆರಿಫ್ ಅಲಿ ಮನಿಯಾರ್, ರಫೀ ಇಂಜಿನಿಯರ್ ಮತ್ತು ಜಮೀಲುರ್ರಹಮಾನ್ ಹಾಗೂ ಜಂಟಿ ಅಕ್ಷನ್ ಕಮಿಟಿಯ ಸದಸ್ಯರು ಕಲಬುರಗಿ ನಗರದಲ್ಲಿ ಉಮ್ಮೀದ್ ನೊಂದಣಿ ಕೇಂದ್ರ ಉದ್ಘಾಟನೆಯಾಗಿರುವುದಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಅಬ್ದುಲ್ ಮನ್ನಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಝರ್ ಆಲಂ ಖಾನ್, ಕೆಎಂಡಿಸಿ ಜಿಲ್ಲಾ ಡಿಒ ಹಝ್ರತ್ ಅಲಿ, ಖಾಜಾ ಬಂದಾ ನವಾಜ್ ಛೋಟಿ ದರ್ಗಾದ ಸಜ್ಜಾದಾ ನಶೀನ್ ಹಜರತ್ ಯದ್ದುಲ್ಲಾಹ ಹುಸೈನಿ ನಿಜಾಮ್ ಬಾಬಾ, ಆರಿಫ್ ಅಲಿ ಮನಿಯಾರ್, ಜಮೀಲುರ್ ರಹಮಾನ್, ರಫೀ ಇಂಜಿನಿಯರ್, ಅಫ್ಜಲ್ ಮೆಹಮೂದ್, ನ್ಯಾಯವಾದಿ ಜಬ್ಬಾರ್ ಗೋಲಾ, ಲಾಯಿಕ್ ಪಾಷಾ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.