ಕಲಬುರಗಿ | ಜಗತ್ತಿಗೆ ಭಾರತ ಕೊಟ್ಟ ಆರೋಗ್ಯ ಭಾಗ್ಯವೇ ಯೋಗ : ನಿರ್ಮಲಾ ಕೆಳಮನಿ
ಕಲಬುರಗಿ : ಜಗತ್ತಿಗೆ ಭಾರತ ಕೊಟ್ಟ ಆರೋಗ್ಯ ಭಾಗ್ಯವೇ ಯೋಗ, ಇದು ಜಗತ್ತು ಕಣ್ಣು ಬಿಡುವ ಮುಂಚೆಯೆ 5,000 ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದು ಹಿಂಗುಲಾಂಬಿಕಾ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಯೋಗ ತರಬೇತುದಾರರಾದ ನಿರ್ಮಲಾ ಕೆಳಮನಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ.ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದಲ್ಲಿ ನಡೆದ ನಮಸ್ತೆ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಬೆಳವಣಿಗೆಗೆ ಆಹಾರ ಪದ್ಧತಿ ಹಾಗೂ ಯೋಗಾಭ್ಯಾಸ ಅತೀ ಮುಖ್ಯವಾದುದು. ಆಹಾರಕ್ಕೂ ಆರೋಗ್ಯಕ್ಕೂ ನಂಟಿದೆ. ಇತ್ತೀಚೆಗಿನ ನಮ್ಮ ಜೀವನ ಕ್ರಮ ನಾವು ಸೇವಿಸುವ ಆಹಾರದ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ.ಭೀಮಳ್ಳಿ ಮಾತನಾಡಿ, ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿರುವ ಮಾನವನಿಗೆ ಒತ್ತಡದ ಜೀವನದ ನಡುವೆ ಆರೋಗ್ಯ ಕಾಪಾಡಿಕೊಳ್ಳಬೇಕಾದ ಸನ್ನಿವೇಶ ಬಂದೊದಗಿದೆ. ಒತ್ತಡದಿಂದ ಮಾನಸಿಕ, ದೈಹಿಕ ತೊಂದರೆಗಳು ಕಾಣಿಸಿಕೊಂಡು ಆಸ್ಪತ್ರೆ ಬಾಗಿಲು ತಟ್ಟುವ ಬದಲು ಯೋಗದ ಮೂಲಕ ಸದಾಕಾಲ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಕಾಲೇಜಿನ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪೂರೆ, ಡಾ.ಸಾಯಿನಾಥ ಪಾಟೀಲ್, ನಾಗಣ್ಣ ಘಂಟಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ ಎಸ್ ಆರ್ ಮೀಸೆ, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸಂಜೋತ್ ಶಹಾ, ಪತಂಜಲಿ ಯೋಗ ಸಮಿತಿಯ ಸುನೀತಾ ಠಾಕೂರ್ ಕಾರ್ಯಕ್ರಮದ ಸಂಘಟಕಿ ಪ್ರೊ.ಅಂಬಿಕಾ ಹಾಗರಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರೊ. ಪ್ರೀಯಾ ರುದ್ರವಾಡಿ ಕಾರ್ಯಕ್ರಮ ನಿರೂಪಿಸಿದರು, ಪ್ರೊ.ಸಂಜೋತ್ ಶಹಾ ಸ್ವಾಗತಿಸಿದರು. ವಾರಿಧೀ ಕುಲಕರ್ಣಿ ಪ್ರಾರ್ಥಿಸಿದರು. ಪ್ರೀಯಾಂಕಾ ಹಿಬಾರೆ ವಂದಿಸಿದರು.