ಕಲಬುರಗಿ | ಆರೆಸ್ಸೆಸ್ನ್ನು ಸಂಪೂರ್ಣವಾಗಿ ನಿಷೇಧಿಸಲು ಆಗ್ರಹಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ
ಕಲಬುರಗಿ : ಆರೆಸ್ಸೆಸ್ ಅನ್ನು ಕೇವಲ ಸರ್ಕಾರಿ, ಅನುದಾನಿತ ಶಾಲಾ ಸಂಸ್ಥೆಗಳಲ್ಲದೆ ರಾಜ್ಯದ ಎಲ್ಲಾ ಕಡೆಗಳಲ್ಲೂ ನಿಷೇಧಿಸಬೇಕು ಎಂದು ಆಗ್ರಹಿಸಿ, ಕಲಬುರಗಿ ಜಿಲ್ಲಾ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಧ್ಯಾಹ್ನ ಜಮಾಯಿಸಿದ ಕಾಂಗ್ರೆಸ್ ಯೂತ್ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಟೈರ್ ಗೆ ಬೆಂಕಿ ಹಚ್ಚುವುದರ ಮೂಲಕ ಆರೆಸ್ಸೆಸ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಪತ್ರ ಬರೆದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಶ್ಲೀಲ ಪದ ಬಳಿಸಿ, ಕೊಲೆ ಬೆದರಿಕೆ ಹಾಕಿರುವುದು ಖಂಡಿಸುತ್ತೇವೆ, ಓರ್ವ ಪ್ರಭಾವಿ ಸಚಿವರಿಗೆ ಇಂತಹ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೆಸ್ಸೆಸ್ ಕಾರ್ಯಕರ್ತರ ಸಂಸ್ಕೃತಿ ಎಂತಹದು ಎಂದು ತೋರಿಸುತ್ತದೆ. ಕೂಡಲೇ ಕರೆ ಮಾಡಿ ನಿಂದಿಸಿರುವ ಆರೋಪಿಯನ್ನು ಬಂಧಿಸಿ, ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇವಲ ಒಂದಷ್ಟೇ ಬೆದರಿಕೆ ಕರೆ ಬಂದಿಲ್ಲ, ಹಲವು ಕಡೆಗಳಿಂದ ಕರೆ ಬಂದಿದೆ, ಅವರ ಪೋನ್ ನಂಬರ್ ಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ಶಕೀಲ್ ಅಹಮದ್ ಸರಡಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಪಾಟೀಲ್ ಹರವಾಳ, ಡಾ.ಕಿರಣ ದೇಶಮುಖ್, ಫಾರೂಕ್ ಮನಿಯಾರ, ರಾಜೀವ್ ಜಾನೆ, ಶಿವಾನಂದ ಹೊನಗುಂಟಿ, ಈರಣ್ಣ ಪಾಟೀಲ್ ಝಳಕಿ, ದಿನೇಶ ದೊಡ್ಡಮನಿ, ಓವೈಸ್ ಶೇಖ್, ಖುಸ್ರೊ ಜಾಗಿರದಾರ, ಪ್ರಕಾಶ ಕಪನೂರ್, ರೇಣುಕಾ ಸಿಂಗೆ, ಗೌತಮ್ ಕರಿಕಲ್, ದೇವೇಂದ್ರ ಸಿನ್ನೂರ್, ಅಶ್ವಿನ್ ಸಂಕಾ, ಶೇಖ ಸಮರಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.