ಮಲ್ಲಿಕಾರ್ಜುನ್ ಖರ್ಗೆ, ಧರ್ಮಸಿಂಗ್ ಇರದಿದ್ದರೆ 371(ಜೆ) ಕಲಂ ಸಿಗುತ್ತಿರಲಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿಯಲ್ಲಿ ಪ್ರಬುದ್ಧ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಉದ್ಘಾಟಣೆ
ಕಲಬುರಗಿ: "ಒಂದು ವೇಳೆ ಈ ಭಾಗದಲ್ಲಿ ಡಾ.ಮಲ್ಲಿಕಾರ್ಜುನ್ ಖರ್ಗೆ, ಧರ್ಮಸಿಂಗ್ ಅವರು ಇರದೇ ಇದ್ದರೆ, ನಮಗೆ 371(ಜೆ) ಕಲಂ ಸಿಗುತ್ತಿರಲಿಲ್ಲ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಹೊರವಲಯದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೆಕೆಆರ್ ಡಿಬಿ ಆಶ್ರಯದಲ್ಲಿ ಅಂದಾಜು 29.52 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ "ಪ್ರಬುದ್ಧ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ"ವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ,ಇಡೀ ದೇಶದಲ್ಲಿ ಉದ್ಯೋಗ, ಶಿಕ್ಷಣ, ಅನುದಾನ ಸೇರಿದಂತೆ ಇತರೆ ವಿಷಯಗಳಲ್ಲಿ ಮೀಸಲಾತಿ ಹಂಚಿಕೆ ನಡೆಯುತ್ತಿದೆ ಎಂದರೆ ಅದು ನಮ್ಮ ರಾಜ್ಯದಲ್ಲಿ ಮಾತ್ರ. ನಮ್ಮಂತಹವರಿಗೆ ಆಯ್ಕೆ ಮಾಡಿದರೆ ಇಂಥ ಕಟ್ಟಡಗಳು ಆಗುತ್ತವೆ. ಇವೆಲ್ಲ ಮುಂದಿನ ಪೀಳಿಗೆಗಳಿಗೋಸ್ಕರ ಮಾಡುತ್ತಿದ್ದೇವೆ. ಶರಣಪ್ರಕಾಶ್ ಪಾಟೀಲ್ ಮತ್ತು ನಾವು ಸಚಿವರು ಆಗದೇ ಇದ್ದರೆ ಜಯದೇವ ಆಸ್ಪತ್ರೆ, ಪ್ರಬುದ್ಧ ಅಕಾಡೆಮಿ, ಮಕ್ಕಳ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿರಲಿಲ್ಲ. ಇತ್ತ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರಿಂದ ಕೇಂದ್ರೀಯ ವಿವಿ, ಇಎಸ್ಐ ಆಸ್ಪತ್ರೆ, ವಿಶೇಷ ಸ್ಥಾನಮಾನ ಸೇರಿದಂತೆ ಹಲವು ಪರಿಣಾಮಕಾರಿ ಕೆಲಸಗಳಾಗಿವೆ ಎಂದರು.
ಪ್ರಬುದ್ಧ ಅಕಾಡೆಮಿ ಕೇವಲ ಕಟ್ಟಡ ಅಲ್ಲ. ಇದರಲ್ಲಿ ಯುವಜನರ ಭವಿಷ್ಯ ಅಡಗಿದೆ. ಸ್ಪರ್ಧಾ ಆಕಾಂಕ್ಷಿಗಳ ಸಮಸ್ಯೆಗಳನ್ನು ಅರಿತುಕೊಂಡು ಸುಸಜ್ಜಿತ ಕಟ್ಟಡ ಎದ್ದು ನಿಂತಿದೆ, ಬೇರೆ ಕಡೆಗಳಲ್ಲಿ ಹೋಗಿ ತರಬೇತಿ ಪಡೆಯುವುದು ತುಂಬಾ ಕಷ್ಟಕರವಾಗಿತ್ತು. ಎರಡು ಮೂರು ತಿಂಗಳಿಗೆ ವಾಪಸ್ಸು ಬರುತ್ತಿದ್ದರು. ಆಹಾರ ಪದ್ಧತಿ, ಭಾಷೆಯ ಸಂಪರ್ಕ, ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸಾಕಷ್ಟು ಅಭ್ಯರ್ಥಿಗಳು ತರಬೇತಿಯನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು. ಈಗ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರು.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಹಗರಣ ಆಗಿತ್ತು. 1ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದರು. ಆದರೆ ಪ್ರತಿಭಾವಂತ ಅಭ್ಯರ್ಥಿಗಳಿಗೆ ನಿರಾಶೆಯಾಗಿತ್ತು. ಹಲವು ಪಿಎಸ್ಐ ಆಕಾಂಕ್ಷಿಗಳು ನಮ್ಮಲ್ಲಿಗೆ ಬಂದು ಪರೀಕ್ಷೆಯಲ್ಲಿ ಅಕ್ರಮ ನಡೆಸಿದೆ ಎಂದು ಹೇಳಿದ್ದರು. ಹಾಗಾಗಿ ಅವರ ಪರವಾಗಿ ಧ್ವನಿ ಎತ್ತಿದ್ದೇವೆ. ಅದರ ಫಲವಾಗಿ ಅರ್ಹರು ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ ಎಂದರು.
ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಐಎಎಸ್ ಅಧಿಕಾರಿಗಳಾಗಲು ಈ ಭಾಗದ ಅಭ್ಯರ್ಥಿಗಳು ಬೆಂಗಳೂರು ಸೇರಿದಂತೆ ಬೇರೆ ರಾಜ್ಯದ ನಗರಗಳಿಗೆ ವಲಸೆ ಹೋಗಿ ತರಬೇತಿ ಪಡೆಯಬೇಕಾಗಿತ್ತು. ಆದರೆ ಇಂದು ಗ್ರಂಥಾಲಯ, ಗಾರ್ಡನ್, ವಿವಿಧ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ. ಈ ಭಾಗದ ಅಭಿವೃದ್ಧಿಗಾಗಿ ನಮ್ಮ ಸರಕಾರ ಪಣ ತೊಟ್ಟಿದೆ ಎಂದು ಹೇಳಿದರು.
ಈ ವೇಳೆ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು. ಜಗದೇವ ಗುತ್ತೇದಾರ್, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಗ್ಯಾರಂಟಿ ಯೋಜನೆಗಳ ಚಂದ್ರಿಕಾ ಪರಮೇಶ್ವರಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರಪ್ಪ ಮರ್ತೂರ್, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಸಯ್ಯದ್ ಮೆಹಮೂದ್ ಚಿಸ್ತಿ ಸಾಹೇಬ್, ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಕೆಕೆಆರ್ ಡಿಬಿ ಕಾರ್ಯದರ್ಶಿ ನಳಿನ್ ಅತುಲ್, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿಇಒ ಭoವರಸಿಂಗ್ ಮೀನಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಂಗಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.