ಖರ್ಗೆ ಸಾಹೇಬರ ಪರಿವಾರಕ್ಕೆ ನಿಂದಿಸಿದರೆ ನಮ್ಮ ಕುಟುಂಬಕ್ಕೆ ನಿಂದನೆ ಮಾಡಿದಂತೆ: ಶಾಸಕ ಡಾ. ಅಜಯ್ ಸಿಂಗ್
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ನಿಂದಿಸುವುದು ಹಾಗೂ ಬೆದರಿಕೆ ಕರೆ ಮಾಡಿರುದನ್ನು ಕೆಕೆಆರ್ಡಿಬಿ ಅಧ್ಯಕ್ಷ ಶಾಸಕ ಡಾ. ಅಜಯ್ ಧರ್ಮಸಿಂಗ್ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಹಿರಿಯರು, ಮುತ್ಸದ್ದಿಗಳಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಮತ್ತು ದಿ. ಧರ್ಮಸಿಂಗ್ ಕುಟುಂಬಗಳು ಒಂದೇ ಕುಟುಂಬ ಎನ್ನುವಂತೆ ಬದುಕುತ್ತಿದ್ದೇವೆ. ಖರ್ಗೆ ಕುಟುಂಬವನ್ನು ನಿಂದಿಸಿದರೆ ನಮ್ಮ ಕುಟುಂಬವನ್ನು ನಿಂದಿಸಿದಂತೆ ಎಂದು ಹೇಳಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ದ್ವೇಷಿಸುವ ಮತ್ತು ಅಂಬೇಡ್ಕರ್ ವಾದಿಗಳನ್ನು ಕೆಣಕುವ ಕೀಳು ಮನಸ್ಥಿತಿಗಳನ್ನು ಸಾರ್ವಜನಿಕರು ಈಗಾಗಲೇ ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿರುವ ಇತಿಹಾಸ ಈ ರಾಜ್ಯದಲ್ಲಿ ಕಣ್ಮುಂದಿದೆ.
ಬುದ್ದ, ಬಸವ, ಅಂಬೇಡ್ಕರ್ ಪರಂಪರೆ ನಮ್ಮದು. ನಮಗೆ ಹೋರಾಟ ಹೊಸದಲ್ಲ. ಸೌಹಾರ್ದಯುತ ಮತ್ತು ಆರೋಗ್ಯಕರ ಸಂವಾದದ ಬದಲಿಗೆ ಈ ರೀತಿಯ ವೈಯಕ್ತಿಕ ನಿಂದನೆ ಅಸಬ್ಯ ಶಬ್ದಗಳ ಬಳಕೆಯನ್ನು ಎಲ್ಲರೂ ಖಂಡಿಸಲೇಬೇಕು ಎಂದು ಹೇಳಿದ್ದಾರೆ.
ಆರೋಗ್ಯಕರ ಚರ್ಚೆಯ ಬದಲಿಗೆ ವಯಕ್ತಿಕ ನಿಂದನೆ, ಟೀಕೆಗೆ ಡಾ. ಅಜಯ್ ಸಿಂಗ್ ಖಂಡಿಸಿದ್ದು, ವೈಯಕ್ತಿಕ ಅನಿಸಿಕೆಗಳು, ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳು ಏನೇ ಇರಲಿ, ಅವುಗಳನ್ನು ಸೌಹಾರ್ದಯುತವಾಗಿ ಮತ್ತು ಆರೋಗ್ಯಕರ ಸಂವಾದದ ಮೂಲಕ ಮಂಡಿಸುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. ಸಂಸ್ಕೃತಿ ಮತ್ತು ಸಂಪ್ರದಾಯದ ಮೌಲ್ಯಗಳ ಬಗ್ಗೆ ಮಾತನಾಡುವವರ ನಡೆನುಡಿಗಳಲ್ಲಿ ಸೌಜನ್ಯ ಮತ್ತು ಘನತೆ ಇರಬೇಕಾಗಿತ್ತು.
ಸಾರ್ವಜನಿಕ ಜೀವನದಲ್ಲಿರುವ ಸಚಿವರಾದ ಪ್ರಿಯಾಂಕ್ ಖರ್ಗೆಯವರ ತಾಯಿ ಮತ್ತು ಕುಟುಂಬದವರನ್ನು ಉದ್ದೇಶಿಸಿ ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಮತ್ತು ಬೆದರಿಕೆ ಹಾಕುವುದು ಅತ್ಯಂತ ಖಂಡನೀಯ. ಈ ಅಸಭ್ಯ ಕೃತ್ಯಗಳಲ್ಲಿ ತೊಡಗಿರುವವರು ಸಾಮಾಜಿಕ ಸಂವೇದನೆ ಮತ್ತು ವ್ಯಕ್ತಿಗೌರವದ ಪ್ರಜ್ಞೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.