×
Ad

ಕೆಪಿಎಸ್ ಸಿ ಪರೀಕ್ಷಾರ್ಥಿಗಳ ಬೃಹತ್ ಪ್ರತಿಭಟನೆಗೆ ಎಂಎಲ್ಸಿ ಶಶೀಲ್ ನಮೋಶಿ ಬೆಂಬಲ

Update: 2025-01-15 21:09 IST

ಶಶೀಲ್ ಜಿ.ನಮೋಶಿ

ಕಲಬುರಗಿ : ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಆ.27 (ಪೂರ್ವಭಾವಿ ಪರೀಕ್ಷೆ) ಹಾಗೂ ಡಿ.29ರಂದು (ಮರು ಪೂರ್ವಭಾವಿ ಪರೀಕ್ಷೆ) ಎರಡು ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಉದ್ದೇಶಪೂರ್ವಕವಾಗಿ ಪ್ರಶ್ನೆ ಪತ್ರಿಕೆಗಳಲ್ಲಿ ಭಾಷಾಂತರ ದೋಷ ಎಸಗಿದ್ದು, ಪರೀಕ್ಷೆ ಎದುರಿಸುವ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವೆಸಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದ್ದಾರೆ.

ಈ ಅನ್ಯಾಯ ಸರಿಪಡಿಸಲು ಮತ್ತೊಮ್ಮೆ ಮರು ಪರೀಕ್ಷೆ, ಇಲ್ಲವೇ ಪರೀಕ್ಷೆ ತೆಗೆದುಕೊಂಡ ಎಲ್ಲಾ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆಗೆ ಅರ್ಹತೆ ನೀಡುವ ಕುರಿತು ಪ್ರತಿಭಟನೆಯನ್ನು ಪರೀಕ್ಷಾರ್ಥಿಗಳು ಹಮ್ಮಿಕೊಂಡಿದ್ದು, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ನಮೋಶಿ ತಿಳಿಸಿದ್ದಾರೆ.

ಈ ಹಿಂದಿನಿಂದ ನಾನು ಹೇಳುತ್ತಿದ್ದೇನೆ ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಸುಧಾರಣೆಯಾಗಬೇಕೆಂದು, ಈಗ ಪರೀಕ್ಷಾರ್ಥಿಗಳ ಎರಡನೇ ಬೇಡಿಕೆಯು ಇದೆ ಆಗಿದೆ ಎಂದರು.

ಕೆಎಎಸ್ ಪೂರ್ವಭಾವಿ ಪರೀಕ್ಷೆ ಎದುರಿಸಿದ ಎಲ್ಲಾ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಅರ್ಹತೆ ನೀಡುವುದು, ಪದೇ ಪದೇ ಕರ್ತವ್ಯ ಲೋಪ ಎಸಗುತ್ತಿರುವ ಕೆಪಿಎಸ್ ಸಿ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಪರೀಕ್ಷಾ ನಿಯಂತ್ರಕರನ್ನು ಸಂಪೂರ್ಣವಾಗಿ ಬದಲಾಯಿಸದೆ ಯಾವುದೇ ಪರೀಕ್ಷೆಗಳನ್ನು ಕೆಪಿಎಸ್ ಸಿ ನಡೆಸಬಾರದು, ಗ್ರೂಪ್ ಎ ಮತ್ತು ಗ್ರೂಪ್ ಬಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ನೇತೃತ್ವದ ಅತ್ಯುತ್ತಮ ಹಾಗೂ ಪಾರದರ್ಶಕ ಪರೀಕ್ಷೆಗೆ ಹೆಸರಾದ ಯುಪಿಎಸ್ ಸಿಗೆ ನೀಡಬೇಕು, ಇತ್ತೀಚೆಗೆ ನಡೆದ ಗ್ರೂಪ್ ಸಿ ಪರೀಕ್ಷೆಗಳಲ್ಲಿ OMR ತಿದ್ದುಪಡಿಯಾಗಿದ್ದು, ಕೂಡಲೇ ಸಮಗ್ರ ತನಿಖೆಯಾಗಿ ಪಾರದರ್ಶಕ ನೇಮಕಾತಿ ಆಗಬೇಕು ಹಾಗೂ ಬಾಕಿ ಉಳಿದಿರುವ ಎಲ್ಲಾ ಫಲಿತಾಂಶಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ನಮೋಶಿ ಆಗ್ರಹಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News