×
Ad

ಕಲಬುರಗಿ 3ನೇ ರಾಷ್ಟ್ರೀಯ ಮೇಳಕ್ಕೆ ಸಾಕ್ಷಿಯಾಗಲಿರುವ ನಮ್ಮ ʼಸರಸ್ ಮೇಳ-2025ʼ

Update: 2025-02-22 19:32 IST

ಕಲಬುರಗಿ : ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಜಾತ್ರೆ ಮೈದಾನದಲ್ಲಿ ಇದೇ ಫೆ.24 ರಿಂದ 10 ದಿನಗಳ ಕಾಲ ರಾಷ್ಟ್ರ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳು ತಯ್ಯಾರಿಸಿದ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುವುದರಿಂದ 10 ದಿನಯುದ್ದಕ್ಕೂ ಸ್ಬಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.

ಶನಿವಾರ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಸರಸ್ ಮೇಳ ಸಂಬಂಧ ರಚಿಸಲಾಗಿರುವ ವಿವಿಧ ಸಮಿತಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಸ ಸಂಗ್ರಹಣೆಗೆ ಪಾಲಿಕೆ ವತಿಯಿಂದ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಬೇಕು. ಅಲ್ಲಲ್ಲಿ ಬಯೋ ಟಾಯಲೆಟ್ ವ್ಯವಸ್ಥೆ ಮಾಡಬೇಕು ಎಂದರು.

ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿರುವುದರಿಂದ ಮಾರಾಟಕ್ಕೆ ಜನ ಬರ್ತಾರೆ. ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಬೇಕು. ಪ್ರತಿ ದಿನ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಇರುವುದರಿಂದ ಸಹಜವಾಗಿಯೇ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪಾರ್ಕಿಂಗ್ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ ಮಾಡಬೇಕು. ಸುಗಮ ಸಂಚಾರಕ್ಕೆ ಹೆಚ್ಚಿನ ಟ್ರಾಫಿಕ್ ಸಿಬ್ಬಂದಿ ನಿಯೋಜನೆ ಜೊತೆಗೆ ಜಾತ್ರೆ ಮೈದಾನ ಸುತ್ತ ಸೈನೇಜ್ ಬೋರ್ಡ್ ಅಳವಡಿಸಬೇಕು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂದ ಜಿಲ್ಲಾಧಿಕಾರಿಗಳು, ಎರಡು ಶಿಪ್ಟ್ ನಲ್ಲಿ ವೈದ್ಯರು ಕೆಲಸ ನಿರ್ವಹಿಸುವಂತೆ ಅಂಬುಲೆನ್ಸ್ ವಾಹನದ ಜೊತೆಗೆ ಒಂದು ವೈದ್ಯಕೀಯ ತಂಡ ಮತ್ತು ಮುಂಜಾಗ್ರತೆಯಾಗಿ ಅಗ್ನಿ ಅವಘಡ ನಿಯಂತ್ರಣಕ್ಕೆ ಅಗ್ನಿಶಾಮಕ ತಂಡ ಸ್ಥಳದಲ್ಲಿ ತೈನಾತಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.

ಬೇಸಿಗೆ ಇರುವ ಕಾರಣ ಕುಡಿಯುವ ನೀರು ನಿರಂತರ ಪೂರೈಸುವ ವ್ಯವಸ್ಥೆ ಆಗಬೇಕು. ವಿವಿಧ ರಾಜ್ಯಗಳಿಂದ ಬರುವ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಊಟದ ವ್ಯವಸ್ಥೆ, ವಸತಿ ಎಲ್ಲವು ಅಚ್ಚುಕಟಾಗಿ ಮಾಡಲು ಪರಸ್ಪರ ಅಧಿಕಾರಿಗಳು ಸಮನ್ವಯ ಸಾಧಿಸಬೇಕು. ಮೇಳ ಯಶಸ್ಸಿಗೆ ವೇದಿಕೆ, ಆಹಾರ, ಸಆರಿಗೆ, ಸಾಂಸ್ಕೃತಿಕ, ಮಾಧ್ಯಮ, ನೀರು ಸರಬರಾಜು ಹಾಗೂ ನೈರ್ಮಲ್ಯ, ಸುರಕ್ಷಾ, ಅಗ್ನಿಶಾಮಕ ಹೀಗೆ ಒಟ್ಟು 8 ಸಮಿತಿಗಳನ್ನು ರಚಿಸಿ ಕೆಲಸ ಕಾರ್ಯ ಹಂಚಿಕೆ ಮಾಡಿದ್ದು, ಅದರಂತೆ ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಚಾಚು ತಪ್ಪದೆ ಮಾಡಬೇಕು ಎಂದರು.

ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಕೆ.ಅಲಿ ಮಾತನಾಡಿ, 2018 ರಿಂದ ಈ ರೀತಿಯ ರಾಷ್ಟ್ರ ಮಟ್ಟದ ಸರಸ್ ಮೇಳ ಆಯೋಜಿಸಲಾಗುತ್ತಿದೆ. ಬೆಂಗಳೂರು, ಬೆಳಗಾವಿಯಲ್ಲಿ ಈಗಾಗಲ ಮಾಡಿದ್ದು, ಕಲಬುರಗಿ ಮೂರನೇ ಮೇಳಕ್ಕೆ ಸಾಕ್ಣಿಯಾಗಲಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾರಾಟ ಮೇಳ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ಕಾರ್ಯಕ್ರಮ ವ್ಯವಸ್ಥಾಪಕ ಬೆಳ್ಳಿಗೌಡ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ ಸೇರಿದಂತೆ ವಿವಿಧ ಸಮಿತಿಯ ಅನೇಕ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News