ಕಲಬುರಗಿ | ವಸತಿ ಶಾಲೆಗಳ ನಿರ್ವಹಣೆಗೆ ಕರ್ನಾಟಕ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಸತಿ ಶಾಲೆಗಳ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ವಸತಿ ಶಾಲೆಗಳ ನಿರ್ವಹಣೆಗಾಗಿ “ವಸತಿ ಶಿಕ್ಷಣ ನಿರ್ದೇಶನಾಲಯ” ರಚಿಸಬೇಕು ಅಥವಾ ಎಸ್.ಸಿ, ಎಸ್.ಟಿ, ಬಿ.ಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡುವುದು. ಖಾಯಂ ನೌಕರರಿಗೆ ಕರ್ನಾಟಕ ಜ್ಯೋತಿ ಸಂಜೀವಿನಿ ಯೋಜನೆಯನ್ನು ಕ್ರೈಸ್ ಖಾಯಂ ನೌಕರರಿಗೆ ವಿಸ್ತರಿಸಬೇಕು. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡಬೇಕು. ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ನೀಡುವುದು. ಖಾಯಂ ನೌಕರರಿಗೆ ಶೇ.10ರಷ್ಟು ವಿಶೇಷ ಭತ್ಯೆ ನೀಡಬೇಕೆಂದು ಒತ್ತಾಯಿಸಿದರು.
ವಸತಿ ಶಾಲೆಗಳ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಕೊಡೇಕಲ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕ್ರೈಸ್ ವಸತಿ ಶಾಲೆಗಳ ಖಾಯಂ ಶಿಕ್ಷಕರು/ನೌಕರರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಪ್ರಮುಖ ಬೇಡಿಕೆಗಳು ಈಡೇರಿಸುವವರೆಗೂ ಧರಣಿ ಸತ್ಯಾಗ್ರಹವನ್ನು ಕೈ ಬಿಡುವುದಿಲ್ಲ ಎಂದು ಹೇಳಿದರು.
ಇದೆ ವೇಳೆ ಸಂಘದ ಮುಖಂಡ ಅಣ್ಣವೀರ ಹರಸೂರ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಯಿ ಎಚ್.ಕಪನೂರು, ಶಿವರಾಜ ಗುಂಡಾಪುರ, ಡಾ.ರಾಜಶೇಖರ ಮಾಂಗ್, ಶಿವಾನಂದ ನಿರೋಣಿ, ರಾಘವೇಂದ್ರ ಬೆಳಗುಂಪಿ, ಜ್ಯೋತಿ ಠಾಕೂರ, ಚಿಂತಮ್ ರೆಡ್ಡಿ ತ್ರಿವೇಣಿ, ಸೇರಿದಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.