ರೌಡಿಶೀಟರ್ ಪ್ರಭುಲಿಂಗ ಕಲಬುರಗಿ ನಗರದಿಂದ ಧಾರವಾಡಕ್ಕೆ ಗಡಿಪಾರು
ಪ್ರಭುಲಿಂಗ ರಾಚಯ್ಯ ಸ್ವಾಮಿ
ಕಲಬುರಗಿ: ನಗರದ ಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿ ಶೀಟರ್ ಪ್ರಭುಲಿಂಗ ರಾಚಯ್ಯ ಸ್ವಾಮಿ (32) ಎಂಬಾತನನ್ನು ಧಾರವಾಡ ಜಿಲ್ಲೆಯ ಸಬ್-ಅರ್ಬನ್ (ಉಪ ನಗರ) ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಇಲ್ಲಿನ ಸುವರ್ಣ ನಗರದ ನಿವಾಸಿಯಾಗಿರುವ ಪ್ರಭುಲಿಂಗ ವಿರುದ್ದ ಚೌಕ್ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು, ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿರುತ್ತವೆ. 2011 ರಿಂದ 2024 ಸಾಲಿನವರೆಗೆ ಭಾರತೀಯ ದಂಡ ಸಂಹಿತೆ, ಭಾರತೀಯ ಆಯುಧ ಕಾಯ್ದೆ ಸೇರಿದಂತೆ 4 ಪ್ರಕರಣಗಳು, ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ 1 ಪ್ರಕರಣ ಮತ್ತು ಭಾರತೀಯ ದಂಡ ಪ್ರಕ್ರಿಯೆ ಅಡಿಯಲ್ಲಿ 2 ಪ್ರಕರಣ ಹೀಗೆ ಒಟ್ಟು 7 ಪ್ರಕರಣಗಳಲ್ಲಿ ಪ್ರಮುಖ ಆರೋಪಿತನಾಗಿರುತ್ತಾನೆ. ಸದರಿ ಆರೋಪಿತನು ರೂಢಿಗತ ಅಪರಾಧಿಯಾಗಿದ್ದು ,ಇತನ ವಿರುದ್ಧ 'ಎ' ರೌಡಿ ಶೀಟ್ ತೆರೆದಿದ್ದು, ಪ್ರಸ್ತುತ ರೌಡಿ ಶೀಟ್ ಚಾಲ್ತಿಯಲ್ಲಿ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸದರಿ ಆರೋಪಿಯು ಕಲಬುರಗಿ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಸುಲಿಗೆ, ಅತ್ಯಾಚಾರ, ಅಕ್ರಮ ಚಟುವಟಿಕೆಗಳಂತಹ ಪ್ರಕರಣಗಳಲ್ಲಿ ಭಾಗಿಯಾಗಿದಲ್ಲದೆ, ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ . ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು, ಸಮಾಜ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಪ್ರಭುಲಿಂಗನನ್ನು ಗಡಿಪಾರು ಮಾಡಲಾಗುತ್ತಿದೆ ಎಂದು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆಗಿರುವ ಡಿಸಿಪಿ ಕನಿಕಾ ಸಿಕ್ರಿವಾಲ್ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.