ಸೇಡಂ | ನದಿ ಪಾತ್ರದ ಬಳಿ ಜನರು ಬರದಂತೆ ಎಚ್ಚರ ವಹಿಸಿ : ತಹಶೀಲ್ದಾರ್ ಶ್ರೀಯಾಂಕ ಧನಶ್ರೀ
Update: 2025-09-26 22:54 IST
ಕಲಬುರಗಿ: ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೇಡಂ ತಾಲ್ಲೂಕಿನ ಸಂಗಾವಿ ಎಂ, ಕಾಚೂರ ಹಾಗೂ ಸಂಗಾವಿ ಟಿ. ಸೇತುವೆಗಳಿಗೆ ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೇತುವೆ ಬಳಿ ಮನೆಗಳು ಇರುವುದರಿಂದ ಯಾವುದೇ ಕಾರಣಕ್ಕೂ ಸೇತುವೆ ಕಡೆ ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರಿಗೆ ಸೂಚನೆ ನೀಡಿದರು.
ಸೇತುವೆಗೆ ಇನ್ನೂ ಹೆಚ್ಚಿನ ಪ್ರಮಾಣದ ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ನದಿಯ ಒಳಹರಿವು ಹೆಚ್ಚಾಗುತ್ತದೆ, ಹಾಗಾಗಿ ನದಿಯ ಪಾತ್ರದ ಬಳಿ ಹಸು, ಮೇಕೆ, ದನ ಕರುಗಳು ಬರದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಣ್ಣ ಕೆರೆಗಳು, ಜಲಾಶಯಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮನೆಯಿಂದ ಅನಗತ್ಯವಾಗಿ ಯಾರು ಹೊರಗಡೆ ತೆರಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.