ಸೇಡಂ: ರೈತರ ಸಮಸ್ಯೆ, ವಿದ್ಯುತ್ ಅಭಾವ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆ
ಸೇಡಂ: ರೈತರ ಸಮಸ್ಯೆಗಳು, ಬೆಳೆ ನಷ್ಟ ಪರಿಹಾರ, ವಿದ್ಯುತ್ ಅಭಾವ ಹಾಗೂ ಮುಧೋಳ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಬಿಜೆಪಿ ವತಿಯಿಂದ ಗುರುವಾರ ಮುಧೋಳ ದೊಡ್ಡಗೇಟ್ ಹೆದ್ದಾರಿಯಲ್ಲಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನೇತೃತ್ವದಲ್ಲಿ ಮುಧೋಳ ಮುಖ್ಯ ಗೇಟ್ ಬಳಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಜಮಾಯಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ಅವರಿಗೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ರಾಜ್ಯ ಸರ್ಕಾರ ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ರೈತರ ನ್ಯಾಯಯುತ ಬೇಡಿಕೆಗಳನ್ನು 10 ದಿನಗಳೊಳಗಾಗಿ ಈಡೇರಿಸದಿದ್ದರೆ ಸೇಡಂ ಬಂದ್ಗೆ ಕರೆ ನೀಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಬೆಳೆ ಪರಿಹಾರ, ಬರ ಘೋಷಣೆಗೆ ಒತ್ತಾಯ:
2025-26ನೇ ಸಾಲಿನ ಬೆಳೆ ಪರಿಹಾರ ಹಾಗೂ ಬೆಳೆ ವಿಮೆಯಲ್ಲಿನ ಲೋಪಗಳನ್ನು ಸರಿಪಡಿಸಿ ಅರ್ಹ ರೈತರಿಗೆ ಪರಿಹಾರ ಕಲ್ಪಿಸಬೇಕು. 2026-27ನೇ ಸಾಲಿನಲ್ಲಿ ಸೇಡಂ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಪರಿಹಾರದ ಜತೆಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪಂಪ್ಸೆಟ್ಗಳಿಗೆ ನಿರಂತರ 12 ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು. ಹಾಳಾದ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) 24 ಗಂಟೆಗಳೊಳಗೆ ದುರಸ್ತಿಗೊಳಿಸಬೇಕು. ಕುರಕುಂಟಾ ಹಾಗೂ ಮದಕಲ್ ಗ್ರಾಮಗಳಲ್ಲಿ ಮನೆಗಳಿಗೆ ನೀಡಿರುವ ಲಕ್ಷಾಂತರ ರೂಪಾಯಿ ಮೊತ್ತದ ಅವೈಜ್ಞಾನಿಕ ವಿದ್ಯುತ್ ಬಿಲ್ಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಮುಧೋಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಆಂಬ್ಯುಲೆನ್ಸ್ ಕೊರತೆಯನ್ನು ನಿವಾರಿಸಬೇಕು. ಮುಧೋಳ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆಹಾರ ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಾಕಿ ಉಳಿದಿರುವ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಟಿಸಿ ಒದಗಿಸಬೇಕು. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಕಟ್ಟೆಗಳು ಒಡೆದು ಹಾನಿಗೊಳಗಾದ ಮುಧೋಳ, ನಾಡೇಪಲ್ಲಿ, ಚಂದಾಪೂರ, ಕಡತಾಲ ಹಾಗೂ ಕೋಲಕುಂದ ಗ್ರಾಮಗಳ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಹಾನಿ ಮರುಕಳಿಸದಂತೆ ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಶಿವಶರಣಪ್ಪ ಶಂಕರ, ರೈತ ಮೋರ್ಚಾ ಅಧ್ಯಕ್ಷ ನಾಗರೆಡ್ಡಿ ಪೊಲೀಸ್ ಪಾಟೀಲ, ನಾಗರೆಡ್ಡಿ ಪಾಟೀಲ ದೇಶಮುಖ, ಶರಣಪ್ಪ ತಳವಾರ, ತಿರುಪತಿ ಶಬಾದಕರ್, ಸಿದ್ದು ಬಾನಾರ, ವಿಶ್ವನಾಥ ಪಾಟೀಲ, ನಾರಾಯಣರಾವ್ ಕುಲಕರ್ಣಿ, ಗೋವಿಂದ ಯಾಕಂಬರಿ, ವಿಜಯಕುಮಾರ್ ಆಡಕಿ, ಭೀಮಶಪ್ಪ ಮದರಿ, ರಾಜು ಮದರಿ, ನಾಗೇಂದ್ರಪ್ಪ ಸಾಹುಕಾರ್ ಸಿಲಾರಕೋಟ್, ಡಾ. ಮಧುಸೂದನ್ರೆಡ್ಡಿ ಸಿಲಾರಕೋಟ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ರೈತರು ಹಾಗೂ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.