ಸೇಡಂ| ಇಂದಿರಾ ಗಾಂಧಿ ವಸತಿ ನಿಲಯದಲ್ಲಿ ಅವ್ಯವಸ್ಥೆ: ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹ
ಕಲಬುರಗಿ: ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ, ಶೌಚಾಲಯ ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ವಿಫಲರಾದ ಹಾಸ್ಟೆಲ್ ವಾರ್ಡನ್, ತಾಲೂಕು ಅಧಿಕಾರಿಗಳಿಂದ ಬೇಸತ್ತು ವಸತಿ ನಿಲಯದ ವಿದ್ಯಾರ್ಥಿಗಳು ಮುಧೋಳ ಪೊಲೀಸ್ ಠಾಣೆಗೆ ತೆರಳಿ ಮೌಖಿಕ ದೂರು ಸಲ್ಲಿಸಿದರು.
ಸಮಸ್ಯೆಗಳ ಬಗ್ಗೆ ಅರಿತ ಊರಿನ ಹಿರಿಯ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಕೂಡಲೇ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿ, ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.
ವಸತಿ ನಿಲಯದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಹದಗೆಟ್ಟು ಹೋಗಿವೆ. ಊಟದ ವ್ಯವಸ್ಥೆ ಸಹ ಸರಿಯಾಗಿಲ್ಲ. ಒಂದು ವರ್ಷದ ಹಿಂದಿನ ಹಳೆಯ ಗೋಧಿ, ಕಳಪೆ ಆಹಾರ ಒದಗಿಸುತ್ತಿರುವುದರಿಂದ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್ ಸಹ ಸ್ವಚ್ಛತೆ ಇಲ್ಲದೆ ಹಾಗೇನೇ ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ವಸತಿ ನಿಲಯಕ್ಕೆ ಅನುದಾನ ಬಂದರೂ ಕೂಡ ಮೂಲಭೂತ ಸೌಲಭ್ಯದಿಂದ ವಂಚಿತಗೊಂಡಿದ್ದು, ಕೂಡಲೇ ಸರಿ ಪಡಿಸಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಗರೆಡ್ಡಿ ಪೊಲೀಸ್ ಪಾಟೀಲ್, ತಮ್ಮಪ್ಪ ಬಾಗಳಿ, ವಿಜಯಕುಮಾರ್ ಖೇವುಜಿ, ಲಕ್ಷ್ಮಿಕಾಂತ್ ಹೊನಕೇರಿ, ರಾಘವೇಂದ್ರ ಕಿಟ್ಟದ್, ಬಸಪ್ಪ ಸೇಡಂ, ಲಕ್ಷ್ಮಪ್ಪ, ಶ್ರೀನಿವಾಸ್ ಬೋಯಿನಿ, ಶ್ರೀನಿವಾಸ್ ಗುತ್ತೇದಾರ್, ಮೋಹನ್, ವೆಂಕಟೇಶ್, ಬಸಪ್ಪ ಪ್ಯಾಟೆ, ಅಶೋಕ್ ಬೋಯಿನಿ, ಕೀಶನ್ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.