ಸೇಡಂ | ಕರ್ನಾಟಕಕ್ಕೆ ಕಲ್ಯಾಣ ನಾಡಿನ ಕೊಡುಗೆ ಅಪಾರ: ದಶರಥ ಸಾವೂರ

ವೀರಭದ್ರ ಮಾಮನಿ ಸ್ಮರಣಾರ್ಥ ‘ಕಲ್ಯಾಣ ಕರ್ನಾಟಕ ಪ್ರಶಸ್ತಿ’ ಪ್ರದಾನ

Update: 2026-07-24 20:54 IST

ಸೇಡಂ: ಕರ್ನಾಟಕದ ಅಭಿವೃದ್ಧಿ ಹಾಗೂ ವಿವಿಧ ಕ್ಷೇತ್ರಗಳ ಬೆಳವಣಿಗೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೊಡುಗೆ ಅಪಾರವಾಗಿದೆ. ಇಲ್ಲಿನ ಸಾಧಕರನ್ನು ಗುರುತಿಸಿ, ಅವರ ಸಾಧನೆಗಳನ್ನು ಸಮಾಜದ ಮುಂದೆ ತರುವ ಕೆಲಸವಾಗಬೇಕು ಎಂದು ಪತ್ರಕರ್ತ ದಶರಥ ಸಾವೂರ ಹೇಳಿದರು.

ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸಭಾಭವನದಲ್ಲಿ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದ ವತಿಯಿಂದ ಹಿರಿಯ ಪತ್ರಕರ್ತ ದಿವಂಗತ ವೀರಭದ್ರ ಮಾಮನಿ ಸ್ಮರಣಾರ್ಥ ಆಯೋಜಿಸಿದ್ದ ‘ಕಲ್ಯಾಣ ಕರ್ನಾಟಕ ಪ್ರಶಸ್ತಿ’ ಹಾಗೂ ಶಿಕ್ಷಣ ತಜ್ಞ ದಿವಂಗತ ಶಿವಯ್ಯ ಮಠಪತಿ ಸ್ಮರಣಾರ್ಥ ‘ಶಿವಸಂಪದ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗವು ಪತ್ರಿಕೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ ಭಾಗದ ಸಾಧಕರ ಕೊಡುಗೆಗಳನ್ನು ಗುರುತಿಸಿ ಮುನ್ನೆಲೆಗೆ ತರುವ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇಂತಹ ಗೌರವಗಳು ಪತ್ರಕರ್ತರಲ್ಲಿ ಹೊಸ ಉತ್ಸಾಹ ತುಂಬಿ, ಇನ್ನಷ್ಟು ಉತ್ತಮ ಕಾರ್ಯನಿರ್ವಹಣೆಗೆ ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ದಿವಂಗತ ವೀರಭದ್ರ ಮಾಮನಿ ಹಾಗೂ ಶಿವಯ್ಯ ಮಠಪತಿಯವರ ಸೇವೆ ಈ ಭಾಗಕ್ಕೆ ಅಪಾರವಾಗಿದೆ. ಅವರ ಮಾರ್ಗದರ್ಶನದಿಂದ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಯನ್ನು ದಶರಥ ಸಾವೂರ ಹಾಗೂ ಯಾದಗಿರಿಯ ಪತ್ರಕರ್ತ ಜಗದೀಶಸ್ವಾಮಿ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಚಂದ್ರಗುಂಡ ಶಿವಾಚಾರ್ಯರು ಹಾಗೂ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿದರು. ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿದರು. ಸಿದ್ದಯ್ಯಸ್ವಾಮಿ ಆಡಕಿ ಕಾರ್ಯಕ್ರಮ ನಿರೂಪಿಸಿದರು. ನಾಗಯ್ಯಸ್ವಾಮಿ ಬೊಮ್ನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News