ಏರ್ ಇಂಡಿಯಾ ವಿಮಾನ ಪತನ| ಕೇಂದ್ರ ವಿಮಾನಯಾನ ಸಚಿವ ರಾಜೀನಾಮೆ ನೀಡಬೇಕು: ಈಶ್ವರ ಖಂಡ್ರೆ ಆಗ್ರಹ
Update: 2025-06-13 18:38 IST
ಕಲಬುರಗಿ: ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತ ಸಂಬಂಧ ಕೇಂದ್ರ ವಿಮಾನಯಾನ ಸಚಿವ ರಾಜೀನಾಮೆ ನೀಡಬೇಕು ಎಂದು ಸಚಿವ ಈಶ್ಚರ ಖಂಡ್ರೆ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ವಿಮಾನ ದುರಂತ ಘಟನೆಗೆ ಕೇಂದ್ರ ಸರ್ಕಾರ ಹೊಣೆಹೊರಬೇಕು ಹಾಗೂ ಕೂಡಲೇ ಕೇಂದ್ರ ವಿಮಾನಯಾನ ಸಚಿವ ರಾಜೀನಾಮೆ ನೀಡಬೇಕು. ಇದು ಅತಿದೊಡ್ಡ ದುರಂತವಾಗಿದೆ, ಅತ್ಯಂತ ನೋವಿನ ಸಂಗತಿಯಾಗಿದೆ.
ಇಂತಹ ದುರಂತ ನಡೆಯದಂತೆ ಸರ್ಕಾರ ಕ್ರಮ ಜರುಗಿಸಬೇಕು, ಹೀಗಾಗಿ ಈ ದುರಂತದ ಬಗ್ಗೆ ನಿಸ್ಪಕ್ಷಪಾತವಾಗಿ ತನಿಖೆಯಾಗಿ ಆ ವರದಿ ಜನರ ಮುಂದೆ ಇಡಬೇಕು ಎಂದರು.
ಕಾಲ್ತುಳಿತ ಪ್ರಕರಣಕ್ಕೆ ರಾಜೀನಾಮೆ ಕೊಡಬೇಕು ಎನ್ನುವ ಬಿಜೆಪಿಗರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ಕಾಲ್ತುಳಿತಕ್ಕೆ ರಾಜೀನಾಮೆ ಕೇಳುವವರು ಉತ್ತರ ಪ್ರದೇಶದಲ್ಲಿ ಕುಂಭಮೇಳದಲ್ಲಿ ಘಟನೆ ಕುರಿತಾಗಿಯೂ ರಾಜೀನಾಮೆ ಕೇಳಬೇಕು, ಸಾವಿನಲ್ಲಿ ರಾಜಕೀಯ ಮಾಡಬಾರದು ಎಂದು ತಿರುಗೇಟು ನೀಡಿದ್ದಾರೆ.