ಸಿರಿಬಾಗಿಲು | ಯಕ್ಷಗಾನ ಪ್ರಸಂಗಗಳಿಗೂ ಮಹಾಕಾವ್ಯದ ಯೋಗ್ಯತೆ ಇದೆ: ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್
‘ವೀರ ತಪಸ್ವಿ ಪರಶುರಾಮ’ ಯಕ್ಷಗಾನ ಕೃತಿ ಲೋಕಾರ್ಪಣೆ; ಪ್ರಸಂಗ ರಚನೆ ಕಮ್ಮಟಕ್ಕೆ ಉತ್ತಮ ಸ್ಪಂದನೆ
ಸಿರಿಬಾಗಿಲು (ಕಾಸರಗೋಡು) : ನಮ್ಮ ನಡುವಿನ ಅನೇಕ ಯಕ್ಷಗಾನ ಪ್ರಸಂಗಗಳು ಮಹಾಕಾವ್ಯದ ಎಲ್ಲ ಲಕ್ಷಣಗಳನ್ನು ಹೊಂದಿದ್ದು, ಅವುಗಳನ್ನು ಮಹಾಕಾವ್ಯಗಳೆಂದು ಗುರುತಿಸುವ ಔದಾರ್ಯತೆ ವಿಮರ್ಶಾ ವಲಯದಲ್ಲಿ ಇನ್ನೂ ಮೂಡಿಬಂದಿಲ್ಲ ಎಂದು ಹಿರಿಯ ಪ್ರಸಂಗಕರ್ತ ಹಾಗೂ ಸಂಶೋಧಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅಭಿಪ್ರಾಯಪಟ್ಟರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಭಾನುವಾರ ನಡೆದ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಹಾಗೂ ಹಿರಿಯ ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್ ರಚಿಸಿರುವ ‘ವೀರ ತಪಸ್ವಿ ಪರಶುರಾಮ’ ಯಕ್ಷಗಾನ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾರ್ತಿಸುಬ್ಬನ ಪ್ರಸಂಗಗಳು ಕಾವ್ಯ ಸೌಂದರ್ಯದಿಂದ ಕೂಡಿದ್ದರೂ ಅವುಗಳನ್ನು ಮಹಾಕಾವ್ಯವೆಂದು ಪರಿಗಣಿಸಲು ಹಿಂದೇಟು ಹಾಕಲಾಗುತ್ತಿದೆ. ಯಕ್ಷಗಾನ ಕಾವ್ಯದ ಸೌಂದರ್ಯ, ಹಿರಿಮೆ ಮತ್ತು ಸಾಹಿತ್ಯ ಮೌಲ್ಯಗಳನ್ನು ಸಮರ್ಪಕವಾಗಿ ಪರಿಚಯಿಸುವ ಕೆಲಸ ನಡೆಯುತ್ತಿಲ್ಲ. ರಂಗಸ್ಥಳದಲ್ಲಿ ಮಾತ್ರವಲ್ಲ, ಯಕ್ಷಗಾನ ಕಾವ್ಯವನ್ನು ಓದುವ ಮೂಲಕವೂ ಹೊಸ ಅನುಭವ ಹಾಗೂ ರಸಾಸ್ವಾದ ದೊರೆಯುತ್ತದೆ ಎಂದು ಹೇಳಿದರು.
ಬೃಹತ್ ಗಾತ್ರದ ಕೃತಿಗಳೆಲ್ಲ ಮಹಾಕಾವ್ಯಗಳಾಗುವುದಿಲ್ಲ. ಅವುಗಳಲ್ಲಿ ಕಾವ್ಯ ಸೌಂದರ್ಯ ಇರಬೇಕು. ಶೇಡಿಗುಮ್ಮೆ ವಾಸುದೇವ ಭಟ್ ಅವರ ‘ವೀರ ತಪಸ್ವಿ ಪರಶುರಾಮ’ ಕೃತಿ ಶಬ್ದ ಮತ್ತು ಅರ್ಥಗಳ ಸಮನ್ವಯ ಹೊಂದಿದ ಶ್ರೇಷ್ಠ ಕಾವ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪ್ರಸಂಗಕರ್ತ ಶ್ರೀಧರ ಡಿ.ಎಸ್. ಮಾತನಾಡಿ, ಶೇಡಿಗುಮ್ಮೆ ವಾಸುದೇವ ಭಟ್ ಅವರ ಯಕ್ಷಗಾನ ಕ್ಷೇತ್ರದ ಸೇವೆ ಅಮೂಲ್ಯವಾಗಿದೆ. ಅವರ ಸಾಧನೆಯನ್ನು ಯಕ್ಷಗಾನ ಅಕಾಡೆಮಿ ಗುರುತಿಸಿ, ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದರು.
ಶ್ರೀ ಧರ್ಮಸ್ಥಳ ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಮೇಶ್ ಶಿರೂರು ಕೃತಿ ಪರಿಚಯಿಸಿ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ವಂದಿಸಿದರು. ಯೋಗೀಶ್ ರಾವ್ ಚಿಗುರುಪಾದೆ ಕಾರ್ಯಕ್ರಮ ನಿರೂಪಿಸಿದರೆ, ಚಂದ್ರಹಾಸ ಕಯ್ಯಾರ್ ಪ್ರಾರ್ಥಿಸಿದರು.
ಬಳಿಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಮಾರ್ಗದರ್ಶನದಲ್ಲಿ ದಿನಪೂರ್ತಿ ನಡೆದ ಯಕ್ಷಗಾನ ಪ್ರಸಂಗ ರಚನೆ ಕಮ್ಮಟದಲ್ಲಿ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು, ಚಂದ್ರಹಾಸ ಕಯ್ಯಾರ್, ಅಮೋಘ ಶಂಕರ ಉಜಿರೆ, ರಾಜಗೋಪಾಲ್ ಕನ್ಯಾನ, ಉಮೇಶ್ ಶಿರೂರು, ಯೋಗೀಶ್ ರಾವ್ ಚಿಗುರುಪಾದೆ, ದೀವಿತ್ ಪೆರಾಡಿ, ಶುಭಾಶಯ, ಮಯೂರ ನಾಯ್ಗ, ಗಿರೀಶ್ ಹೆಗ್ಡೆ ಹಾಗೂ ವರ್ಧನ್ ಎಂ. ಸುರತ್ಕಲ್ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು.