Uppala | ಒಂದೂವರೆ ವರ್ಷದ ಮಗು ಮೇಲೆ ಬೀದಿನಾಯಿ ದಾಳಿ

Update: 2026-07-18 15:20 IST

photo: Gemini AI

ಮಂಜೇಶ್ವರ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿದ ಘಟನೆ ಉಪ್ಪಳ ಸಮೀಪದ ಜೋಡುಕಲ್ಲು ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಉಪ್ಪಳ ಜೋಡುಕಲ್ಲು ನಿವಾಸಿ ಗುರುಪ್ರಸಾದ್ ಮತ್ತು ತುಳಸಿ ದಂಪತಿಯ ಪುತ್ರ ರಿತುರಾಜ್ (ಒಂದೂವರೆ ವರ್ಷ) ಬೀದಿನಾಯಿ ದಾಳಿಗೆ ಒಳಗಾದ ಮಗು.

ತಾಯಿ ಮನೆಯ ಹಿತ್ತಲಿನ ಬಳಿ ಬಟ್ಟೆ ಒಗೆಯುತ್ತಿದ್ದ ವೇಳೆ ಮಗು ರಿತುರಾಜ್ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದನು. ಇದೇ ಸಂದರ್ಭದಲ್ಲಿ ಎಲ್ಲಿಂದಲೋ ಓಡಿಬಂದ ಬೀದಿ ನಾಯಿಯೊಂದು ಏಕಾಏಕಿ ಮಗುವಿನ ಮೇಲೆ ಮುಗಿಬಿದ್ದಿದೆ. ನಾಯಿಯು ಮಗುವಿನ ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ. ಮಗುವಿನ ಚೀರಾಟ ಹಾಗೂ ತಾಯಿ ತುಳಸಿ ಅವರ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬಂದಾಗ ಬೀದಿ ನಾಯಿ ಸ್ಥಳದಿಂದ ಪರಾರಿಯಾಗಿದೆ.

ಆಸ್ಪತ್ರೆಗೆ ದಾಖಲು:ದಾಳಿಯಿಂದಾಗಿ ಮಗುವಿನ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಮಗುವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಉಪ್ಪಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸ್ಥಳೀಯ ಆಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News