ಕನಕಗಿರಿ : ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
ಕೊಪ್ಪಳ : ಕನಕಗಿರಿ ತಾಲೂಕಿನ ಚಿರ್ಚನಗುಡ್ಡ ತಾಂಡಾದ ಗುಡ್ಡದ ಪ್ರದೇಶದಲ್ಲಿ ಯುವಕನೋರ್ವನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಚಿರ್ಚನಗುಡ್ಡ ತಾಂಡಾದ ಸರ್ವೇ ನಂ.26ರ ಜಮೀನಿನ ಬಳಿಯಲ್ಲಿ ಗುಡ್ಡವಿದ್ದು, ಶನಿವಾರದಂದು ಸಂಜೆ ಜಮೀನಿಗೆ ತೆರಳಿದ್ದ ರೈತ ಶಂಕ್ರಪ್ಪ ಅವರಿಗೆ ಜಮೀನಿನ ಪಕ್ಕದಲ್ಲಿನ ಗುಡ್ಡದಲ್ಲಿ ಸಂಪೂರ್ಣವಾಗಿ ಸುಟ್ಟಿದ್ದ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಮೃತದೇಹ ಕಂಡು ಬಂದಿದೆ. ಕೂಡಲೇ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದಾರೆ.
ಪೊಲೀಸರಿಗೂ ಸುದ್ದಿ ತಲುಪಿದ್ದು, ಪಿಐ ವಿ. ನಾರಾಯಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಡರಾತ್ರಿಯೇ ಡಿವೈಎಸ್ಪಿ, ಎಸ್ಪಿ ಕೃತ್ಯದ ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಇದು ಸುಮಾರು ಕಳೆದ10-15 ದಿನಗಳ ಹಿಂದೆಯೇ ನಡೆದಿರುವ ಘಟನೆಯಾಗಿದೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಲೆಯಾದ ವ್ಯಕ್ತಿ 20-25 ವಯಸ್ಸಿನವನಾಗಿದ್ದು, ಗುರುತು, ಕೊಲೆಗೆ ಕಾರಣ, ಆರೋಪಿಗಳು ಪತ್ತೆಯಾಗಿಲ್ಲ. ಶವವೂ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ವಿಧಿ ವಿಜ್ಞಾನ ಪ್ರಯೋಗಕ್ಕಾಗಿ ಸೋಕೋ ತಂಡ ದೇಹದ ಅಂಗಾಂಗವನ್ನು ಸಂಗ್ರಹಿಸಿದೆ.
ಶ್ವಾನ ದಳದಿಂದ ಕೊಲೆಗಾರರ ಕುರುಹು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.