6ನೇ ಹಂತದ ಮತದಾನ| ಪಕ್ಷದ ಕಾರ್ಯಕರ್ತರು, ಪೋಲಿಂಗ್ ಏಜೆಂಟ್ಗಳನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು: ಮೆಹಬೂಬಾ ಮುಫ್ತಿ ಆರೋಪ
ಮೆಹಬೂಬಾ ಮುಫ್ತಿ | PTI
ಅನಂತ್ನಾಗ್: ಯಾವುದೇ ಕಾರಣವಿಲ್ಲದೆ ತಮ್ಮ ಪಕ್ಷ ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟ್ಗಳನ್ನು ಪೊಲೀಸರು ವಶಪಡಿಸಿಕೊಂಡು ಠಾಣೆಯಲ್ಲಿ ಇರಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇಂದು ಆರೋಪಿಸಿದ್ಧಾರೆ. “ಇವಿಎಂ ತಿರುಚುವ” ಯತ್ನಗಳ ಬಗ್ಗೆಯೂ ದೂರುಗಳಿವೆ ಎಂದು ಅವರು ಆರೋಪಿಸಿದ್ದಾರೆ.
ಇಂದು ಮತದಾನ ನಡೆಯುತ್ತಿರುವ ದಕ್ಷಿಣ ಕಾಶ್ಮೀರದ ಅನಂತ್ನಾಗ್-ರಜೌರಿ ಕ್ಷೇತ್ರದಿಂದ ಮೆಹಬೂಬಾ ಮುಫ್ತಿ ಸ್ಪರ್ಧಿಸುತ್ತಿದ್ದಾರೆ. ಅವರು ಇಂದು ಪಕ್ಷ ನಾಯಕರು ಮತ್ತು ಕಾರ್ಯಕರ್ತರ ಜೊತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ನನ್ನ ಮೊಬೈಲ್ ಫೋನ್ನಲ್ಲಿ ಹೊರಹೋಗುವ ಕರೆಗಳನ್ನು ಯಾವುದೇ ಕಾರಣ ನೀಡದೆ ನಿರ್ಬಂಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. “ಬೆಳಿಗ್ಗೆಯಿಂದ ಯಾವುದೇ ಕರೆ ಮಾಡಲು ಆಗುತ್ತಿಲ್ಲ. ಅನಂತ್ನಾಗ್ ಲೋಕಸಭಾ ಕ್ಷೇತ್ರದಲ್ಲಿ ಈ ರೀತಿ ಆಗಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ,” ಎಂದು ಅವರು ಹೇಳಿದ್ದಾರೆ.
ಮತದಾನಕ್ಕಿಂತ ಮುಂಚೆಯೇ ತಮ್ಮ ಪಕ್ಷ ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟರನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಶುಕ್ರವಾರವೇ ಮೆಹಬೂಬಾ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
ಆದರೆ ಕೆಲವೇ ಕೆಲವು ಮಂದಿಯನ್ನು ವಶಪಡಿಸಿಕೊಳ್ಳಲಾಗಿದೆ, ಕಾನೂನು ಸುವ್ಯಸ್ಥೆಗೆ ಧಕ್ಕೆ ತರಬಹುದೆಂಬ ಶಂಕೆಯಿರುವ ಹಾಗೂ ಹಿಂದೆ ಪ್ರಕರಣಗಳನ್ನು ಹೊಂದಿರುವವರನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಅನಂತ್ನಾಗ್ ಪೊಲೀಸರು ಹೇಳಿದ್ದಾರೆ.
ಮೆಹಬೂಬಾ ಅವರು ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಮಿಯಾನ್ ಅಲ್ತಾಫ್ ಅಹ್ಮದ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.