ಮಂಡ್ಯ | ರೈಲಿಗೆ ಸಿಲುಕಿ 17 ಕುರಿಗಳ ಸಾವು
Update: 2025-01-30 19:58 IST
ಮಂಡ್ಯ : ನಾಯಿಗಳು ಅಟ್ಟಾಡಿಸಿದ ವೇಳೆ ಕುರಿಮಂದೆ ಚದುರಿದ ಪರಿಣಾಮ 17 ಕುರಿಗಳು ರೈಲ್ವೇ ಟ್ರ್ಯಾಕ್ ದಾಟಲೆತ್ನಿಸಿದಾಗ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸಬೂದನರು ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.
ಹೊಸಬೂದನೂರು ಗ್ರಾಮದ ಜಯಮ್ಮ ಅವರಿಗೆ ಸೇರಿದ 17 ಕುರಿಗಳು ಮೃತಪಟ್ಟಿದ್ದು, ಸುಮಾರು 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ ಎನ್ನಲಾಗಿದೆ.
ಜಯಮ್ಮ ಅವರು ಬಯಲಿನಲ್ಲಿ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಾಯಿಗಳು ಅಟ್ಟಾಡಿಸಿದಾಗ ಚದುರಿದ ಕುರಿಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯ ಸುದ್ದಿ ತಿಳಿದ ಶಾಸಕ ಪಿ.ರವಿಕುಮಾರ್ ಗೌಡ ಅವರು ಕುರಿಗಳನ್ನು ಕಳೆದುಕೊಂಡು ನಷ್ಟಕ್ಕೀಡಾಗಿರುವ ಜಯಮ್ಮ ಅವರಿಗೆ ವೈಯಕ್ತಿಕವಾಗಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.