×
Ad

ಕೇಂದ್ರ ಚುನಾವಣಾ ಆಯೋಗ ಎಸ್.ಐ.ಆರ್ ಜಾರಿ ಮಾಡುವುದು ಸಂವಿಧಾನ ಮತ್ತು ಕಾನೂನು ಬಾಹಿರ ನಡೆ : ಶಿವಸುಂದರ್

ʼಮತಗಳ್ಳತನ ಮತ್ತು ಪ್ರಜಾಪ್ರಭುತ್ವದ ಸವಾಲುಗಳುʼ ವಿಚಾರ ಸಂಕಿರಣ

Update: 2025-09-07 20:29 IST

ಮೈಸೂರು, ಸೆ.7 : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರ ಚುನಾವಣಾ ಆಯೋಗದ ಮೂಲಕ ಎಸ್.ಐ.ಆರ್ (ಸ್ಪೆಷಲ್ ಇಂಟೆನ್ಸಿವ್ ರಿವಿಜನ್) ಜಾರಿ ಮಾಡಿ ದೇಶದ ಬಡ ಮಧ್ಯಮ ವರ್ಗದ ನಾಗರಿಕರ ಪ್ರಜಾಪ್ರಭುತ್ವದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಇದು ಸಂವಿಧಾನ ಮತ್ತು ಕಾನೂನು ಬಾಹಿರ ನಡೆ ಎಂದು ಚಿಂತಕ ಶಿವಸುಂದರ್ ತಿಳಿಸಿದರು.

ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ರವಿವಾರ ಪೀಪಲ್ಸ್ ಲೀಗಲ್ ಫೋರಂ ಮತ್ತು ಕೆ.ಎಸ್.ಐ.ಸಿ ಹೊರಗುತ್ತಿಗೆ ಮತ್ತು ಇತರೆ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ "ಮತಗಳ್ಳತನ ಮತ್ತು ಪ್ರಜಾಪ್ರಭುತ್ವದ ಸವಾಲುಗಳು" ಎಂಬ ವಿಚಾರ ಸಂಕಿರಣದವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ಮತಗಳ್ಳತನ ಎಂಬುದು ಎಲ್ಲಾ ಕಾಲದಲ್ಲೂ ನಡೆದಿದೆ. ಆದರೆ ಬಿಜೆಪಿಯವರು ವ್ಯವಸ್ಥಿತವಾಗಿ ತಮಗೆ ಬೇಕಾದಂತೆ ಮತಗಳನ್ನು ಪಡೆಯುವ ಹುನ್ನಾರಕ್ಕೆ ಮುಂದಾಗಿದ್ದಾರೆ. ಸಂವಿಧಾನದ ಅಡಿಯಲ್ಲಿಯೇ ಪ್ರಜಾಪ್ರಭುತ್ವವನ್ನು ಟೊಳ್ಳು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಬಿಹಾರದಲ್ಲಿ ಮೊದಲ ಬಾರಿಗೆ ಎಸ್.ಐ.ಆರ್. ಜಾರಿ ಮಾಡಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಇದರಿಂದ 65 ಲಕ್ಷ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಈಗ ಸೆ.10 ರಂದು ಎಲ್ಲಾ ರಾಜ್ಯಗಳಲ್ಲೂ ಎಸ್.ಐ.ಆರ್ ಜಾರಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಹೇಳಿದರು.

ಒಬ್ಬ ವ್ಯಕ್ತಿ ಮತದಾನದ ಹಕ್ಕನ್ನು ಪಡೆಯಲು ಆಧಾರ್, ಓಟರ್ ಐಡಿ, ಅಥವಾ ರೇಷನ್ ಕಾರ್ಡ್‌ ತೋರಿಸಿದರೆ ಸಾಕಿತ್ತು. ಆದರೆ ಎಸ್.ಐ.ಆರ್ ನಲ್ಲಿ ಇವುಗಳೆಲ್ಲವನ್ನು ಹೊರತುಪಡಿಸಿ ಮತದಾನದ ಹಕ್ಕನ್ನು ಪಡೆಯಬೇಕಾದರೆ ಪಾಸ್ ಪೋರ್ಟ್‌, ಶಾಲಾ ದಾಖಲಾತಿ, ಜನನ ಪತ್ರ, ಆಸ್ತಿ ಪತ್ರ ಸೇರಿದಂತೆ ಒಟ್ಟು 11 ದಾಖಲೆಗಳನ್ನು ತೋರಿಸಬೇಕಿದೆ. ಇವುಗಳೆಲ್ಲವೂ ಬಡವರ ಬಳಿ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರಾಜ್ಯದ ಮೊದಲ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸುಕುಮಾರ್ ಸಿಂಗ್ ಅವರು ಎಲ್ಲರನ್ನು ಒಳಗೊಳ್ಳುವಂತೆ ಚುನಾವಣೆ ನಡೆಸುತ್ತಿದ್ದರು. ಶೇ.80ರಷ್ಟು ಅನಕ್ಷರಸ್ಥರಿದ್ದ ಕಾಲದಲ್ಲಿ ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕು ಎಂದು ಸಂಖ್ಯೆ ಮತ್ತು ಗುರುತುಗಳನ್ನು ಜಾರಿಗೆ ತಂದರು. ಆದರೆ ಈಗಿನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಎಸ್.ಐ.ಆರ್ ಮೂಲಕ ಕೆಲವರನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಮುಖ್ಯ ಚುನಾವಣಾ ಆಯುಕ್ತರಿಗೆ ಸಂಪೂರ್ಣ ಅಧಿಕಾರವಿದೆ. ಆದರೆ ಆ ಅಧಿಕಾರವನ್ನು ಕೆಲವರಷ್ಟೇ ಬಳಸಿಕೊಂಡಿದ್ದಾರೆ. ದೇಶದ ಮೊದಲ ಚುನವಣಾ ಆಯುಕ್ತ ಸುಕುಮಾರ್ ಸಿಂಗ್, ಟಿ.ಎನ್.ಶೇಷನ್ ಮತ್ತು ಜೋಸೆಫ್ ಮೈಕೆಲ್ ಲಿಂಗ್ಡೊ ತಮ್ಮ ಅಧಿಕಾರವನ್ನು ಬಳಸಿ ಕಟ್ಟು ನಿಟ್ಟಾಗಿ ಚುನಾವಣೆ ನಡೆಸಿದ್ದಾರೆ ಎಂದು ಹೇಳಿದರು.

ಮತಗಳ್ಳತನದ ಜೊತೆಗೆ ಮತೀಯಗಳ್ಳತನ, ಫಲಿತಾಂಶದ ಕಳ್ಳತನ ಮತ್ತು ಸರಕಾರದ ಕಳ್ಳತನ ಕೂಡ ನಡೆಯುತ್ತಿದೆ. ಇದರ ವಿರುದ್ಧವೂ ಜಾಗೃತಗೊಳ್ಳಬೇಕಿದೆ. ಮತಗಳ್ಳತನ ಒಂದು ಕಡೆಯಾದರೆ, ಫಲಿತಾಂಶದ ನಂತರ ಹೈಜಾಕ್ ಮಾಡಿ ಸರಕಾರ ಮಾಡಲಾಗುತ್ತಿದೆ. ಎಲೆಕ್ಟ್ರೋಲ್ ಬಾಂಡ್ ಮೂಲಕ ದೇಣಿಗೆ ಪಡೆದು ಸರಕಾರದ ಕಳ್ಳತನವೂ ನಡೆಯುತ್ತಿದೆ ಎಂದು ಹೇಳಿದರು.

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಕುರಿತಂತೆ ದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತಕಳ್ಳತನದ ಆರೋಪ ಮಾಡಿದ್ದಾರೆ.‌ಇವರ ಆರೋಪಕ್ಕೆ ಚುನಾವಣಾ ಆಯೋಗ ಡಿಜಿಟಲ್ ಮತದಾನದ ಮಾಹಿತಿ ನೀಡದಿರುವುದೇ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಪೀಪಲ್ಸ್ ಲೀಗಲ್ ಫೋರಂ ನಿರ್ದೇಶಕ ಹಾಗೂ ವಕೀಲ ಪಿ.ಪಿ.ಬಾಬುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್.ಐ.ಸಿ ಹೊರಗುತ್ತಿಗೆ ಮತ್ತು ಇತರೆ ನೌಕರರ ಸಂಘದ ಅಧ್ಯಕ್ಷ ಬಿ.ವಿಜಯೇಂದ್ರ, ವಕೀಲ ಯತೀಶ್ ಜಿ.ವಿ. ಉಪಸ್ಥಿತರಿದ್ದರು.

ತಮ್ಮ ಡಿಗ್ರಿ ಸರ್ಟಿಫಿಕೇಟ್ ತೋರಿಸಿ ಎಂದರೆ ತೋರಿಸಲ್ಲ, ನೀವು ಟೀ ಮಾರುತ್ತಿದ್ದ ರೈಲ್ವೆ ಸ್ಟೇಷನ್ ಆದರು ಯಾವುದು ಎಂದರೆ ಅದನ್ನು ಹೇಳುತ್ತಿಲ್ಲ, ಡಿಗ್ರಿ ಓದಬೇಕಾದರೆ ನಿಮ್ಮ ಒಬ್ಬ ಸ್ನೇಹಿತನೊಬ್ಬನ ಹೆಸರನ್ನಾದರು ಹೇಳಿ ಎಂದರೆ ಹೇಳುತ್ತಿಲ್ಲ. ತನ್ನ ಫೇಕ್ ಡಿಗ್ರಿ ಸರ್ಟಿಫಿಕೇಟ್ ಕೊಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಈಗ ಜನರ ದಾಖಲೆ ಕೇಳುತ್ತಿದ್ದಾರೆ.

-ಶಿವಸುಂದರ್, ಚಿಂತಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News