ದಸರಾ ಚಲನಚಿತ್ರೋತ್ಸವ; ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ
ಮೈಸೂರು, ಸೆ.18: ಮೈಸೂರು ದಸರಾ ಮಹೋತ್ಸವ-2025ರ ಹಿನ್ನೆಲೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುತನ್ ನಿರ್ದೇಶನದ ‘ಲಕುಮಿ’ ಕಿರುಚಿತ್ರಕ್ಕೆ ಪ್ರಥಮ ಬಹುಮಾನ ಹಾಗೂ 20 ಸಾವಿರ ರೂ. ಗೌರವಧನ, ಮಣಿಕಂಠ ನಿರ್ದೇಶನದ ‘ಹಿಂಬಾಲಿಸು’ ಚಿತ್ರಕ್ಕೆ 2ನೇ ಬಹುಮಾನ ಹಾಗೂ 15 ಸಾವಿರ ರೂ. ಗೌರವಧನ ಮತ್ತು ಶಶಿಕುಮಾರ್ ಡಿ.ಎಸ್.ನಿರ್ದೇಶನದ ಹಬ್ಬದ ‘ಹಸಿವು’ ಚಿತ್ರಕ್ಕೆ 3ನೇ ಬಹುಮಾನ ಹಾಗೂ 10 ಸಾವಿರ ರೂ. ಗೌರವಧನ ನೀಡಲಾಯಿತು. ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಲಕುಮಿ ಹಾಗೂ ಅತ್ಯುತ್ತಮ ಸಂಕಲನಗಾರ ವಿಭಾಗದಲ್ಲಿ ಹಿಂಬಾಲಿಸು ಕಿರುಚಿತ್ರಕ್ಕೆ ಪ್ರಶಸ್ತಿ ದೊರೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿರುತೆರೆ ನಟಿ ದೀಪಾ ರವಿಶಂಕರ್, ಕಿರುತೆರೆ ನಟ ಅಶ್ವಿನ್ ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಅಶ್ವತ್ನಾರಾಯಣರನ್ನು ಸನ್ಮಾನಿಸಲಾಯಿತು.
ಚಲನಚಿತ್ರ ಉಪ ಸಮಿತಿ ಉಪಾಧ್ಯಕ್ಷ ಸಿದ್ಧರಾಜು, ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್, ತೀರ್ಪುಗಾರರಾದ ಕಾವಾ ಕಾಲೇಜಿನ ಪ್ರಾಧ್ಯಾಪಕಿ ಚರಿತಾ, ಇ.ಎಂ.ಎಂ.ಆರ್.ಸಿ ತಂತ್ರಜ್ಞರಾದ ಗೋಪಿನಾಥ್, ಉಪ ಸಮಿತಿ ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.