ಮೈಸೂರು | ಅವಹೇಳನಾಕಾರಿ ಪೋಸ್ಟ್ ವಿಚಾರ: ಗಲಾಟೆ ಮಾಡಿದವರನ್ನು ಬಂಧಿಸಲು ತಂಡ ರಚನೆ : ಎಡಿಜಿಪಿ ಹಿತೇಂದ್ರ
Update: 2025-02-11 13:10 IST
ಮೈಸೂರು : ಉದಯಗಿರಿ ಪೊಲೀಸ್ ಠಾಣೆ ಬಳಿ ನಡೆದ ಕಲ್ಲು ತೂರಾಟ ಗಲಾಟೆಯಲ್ಲಿ 7 ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಎಡಿಜಿಪಿ ಹಿತೇಂದ್ರ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಎಡಿಜಿಪಿ ಹಿತೇಂದ್ರ ಅವರು, ಗಲಾಟೆ ಮಾಡಿದವರ ಬಂಧನಕ್ಕೆ ಸ್ಥಳೀಯ ಪೊಲೀಸರಿಂದ ತಂಡ ರಚನೆ ಮಾಡಲಾಗಿದೆ. ಅವಹೇಳನಾಕಾರಿ ಪೋಸ್ಟ್ ಹಾಕಿದ ವಿಚಾರದಲ್ಲಿ ಆರೋಪಿಯನ್ನು ಬೇಗ ಬಿಟ್ಟು ಬಿಡುತ್ತಾರೆ ಎಂದು ಕೆಲವರು ಗಲಾಟೆ ಮಾಡಿದ್ದಾರೆ. ಪೋಸ್ಟರ್ ವಿಚಾರದಲ್ಲಿ ಕೆಲವು ವಂದತಿ ಹಬ್ಬಿದ್ದಕ್ಕೆ ಗಲಾಟೆಯಾಗಿದೆ ಎಂದು ಹೇಳಿದರು.
ಗಲಾಟೆ ಹಿಂದೆ ಯಾರಿದ್ದಾರೆ, ಯಾವುದಾದರೂ ಸಂಘಟನೆ ಇದೆಯಾ? ಎಂಬುದು ತನಿಖೆ ಮೂಲಕ ಗೊತ್ತಾಗುತ್ತದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಎಡಿಜಿಪಿ ಹಿತೇಂದ್ರ ತಿಳಿಸಿದ್ದಾರೆ.