ಮೈಸೂರು ಹೊಸಮಠದ ಪೀಠಾಧ್ಯಕ್ಷ ಚಿದಾನಂದ ಸ್ವಾಮೀಜಿ ನಿಧನ

Update: 2026-08-13 14:43 IST

ಮೈಸೂರು: ಹೊಸಮಠದ ಪೀಠಾಧ್ಯಕ್ಷರು ಹಾಗೂ ಬಸವತತ್ವದ ಪ್ರತಿಪಾದಕರಾಗಿದ್ದ ಚಿದಾನಂದ ಸ್ವಾಮೀಜಿ (76) ಅವರು ಗುರುವಾರ ಬೆಳಿಗ್ಗೆ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಿಗ್ಗೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮಠದ ಸಮೀಪದ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಮೈಸೂರಿನ ಹೊಸಮಠವು ಸುಮಾರು 500 ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ ಪರಂಪರೆಯನ್ನು ಹೊಂದಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಮುಖ ವೀರಶೈವ–ಲಿಂಗಾಯತ ಮಠಗಳಲ್ಲಿ ಒಂದಾಗಿದೆ. ಬಸವತತ್ವದ ಪ್ರಸಾರ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಠವು ಮಹತ್ವದ ಕೊಡುಗೆ ನೀಡಿದೆ.

ಚಿದಾನಂದ ಸ್ವಾಮೀಜಿ ಅವರು ತಮ್ಮ ಗುರುಗಳಾದ ಗುರುಶಾಂತ ಸ್ವಾಮೀಜಿ ಅವರ ನಂತರ 1982ರಲ್ಲಿ ಹೊಸಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ‘ಶ್ರೀ ನಟರಾಜ ಪ್ರತಿಷ್ಠಾನ’ದ ಮೂಲಕ ಹಲವು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಶ್ರಮಿಸಿದ್ದರು. ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ವಿಶೇಷವಾಗಿ ಮಹಿಳೆಯರಿಗೆ ಉಚಿತ ವಸತಿ ಮತ್ತು ಶಿಕ್ಷಣ ಒದಗಿಸುವ ಕಾರ್ಯಕ್ಕೂ ಆದ್ಯತೆ ನೀಡಿದ್ದರು.

12ನೇ ಶತಮಾನದ ಶರಣರ ಸಿದ್ಧಾಂತಗಳ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಅವರು ಬಸವಣ್ಣನವರ ಇತಿಹಾಸ ಹಾಗೂ ಬಸವತತ್ವದ ವಿಚಾರಗಳ ಪರವಾಗಿ ಧ್ವನಿ ಎತ್ತಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಗೂ ಮಠದ ವತಿಯಿಂದ ಬೆಂಬಲ ನೀಡಿದ್ದರು.

ಚಿದಾನಂದ ಸ್ವಾಮೀಜಿ ಅವರ ನಿಧನದ ಸುದ್ದಿ ತಿಳಿದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹೊಸಮಠಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ಮಠದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹೊಸಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News