ಮೈಸೂರು | ಆ.10ರಂದು ಬ್ಯಾರಿ ಕುಟುಂಬದ ಸಮ್ಮಿಲನ ಕಾರ್ಯಕ್ರಮ: ಯು.ಎಚ್.ಉಮರ್
ಮೈಸೂರು,ಆ.7: ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಮೈಸೂರಿನ ತಿಲಕ್ನಗರದ ಈದ್ಗಾ ಮೈದಾನ ಮುಂಭಾಗದ ಎ.ಆರ್.ಕನ್ವೆನ್ಸನ್ ಹಾಲ್ನಲ್ಲಿ ಆ.10ರಂದು ಸಂಜೆ 4ಕ್ಕೆ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ಬ್ಯಾರಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಕಾಡಮಿ ಅಧ್ಯಕ್ಷ ಯು.ಎಚ್.ಉಮರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮಕ್ಸೂದ್ ಅಹ್ಮದ್ ಮುಲ್ಕಿ, ಬ್ಯಾರಿ ಹಾಡುಗಾರ ಪಿ.ಎ.ಹಸನಬ್ಬ ಮೂಡುಬಿದರೆ, ಬ್ಯಾರಿ ಕವಿ ಹೈದರ್ ಅಲಿ ಕಾಟಿಪಳ್ಳ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ‘ಬೆಲ್ಕಿರಿ’ ದೈಮಾಸಿಕ ಬಿಡುಗಡೆ ಮಾಡುವರು ಎಂದು ಮಾಹಿತಿ ನೀಡಿದರು.
ಅಂದು ಬೆಳಿಗ್ಗೆ 11ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಬ್ದುಲ್ ಅಝೀಝ್ ಉದ್ಘಾಟಿಸುವರು. ಮಹಿಳೆಯರಿಗೆ ಬ್ಯಾರಿ ಸಂಪ್ರದಾಯದ ಆಹಾರ ಮತ್ತು ಮೆಹಂದಿ ವಿನ್ಯಾಸ, ಮಕ್ಕಳಿಗೆ ಬ್ಯಾರಿ ಹಾಡು, ಪುರುಷ, ಮಹಿಳೆಯರಿಗೆ ಬ್ಯಾರಿ ರಸಪ್ರಶ್ನೆ ಸ್ಪರ್ಧೆ ನಡೆಯಲಿವೆ. ದಫ್ ಕುಣಿತ, ಒಪ್ಪನೆ ಹಾಡು, ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಜಿ ಯು.ಕೆ.ಹಮೀದ್, ಎಂ.ಐ.ಅಹ್ಮದ್ ಬಾವ, ಆರಂಗಳ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.