ಮೈಸೂರು ಅರಮನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ
ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಮೇರೆಗೆ ರಾಷ್ಟ್ರಪತಿ ಮುರ್ಮು ಅವರು ಮಂಗಳವಾರ ಬೆಳಿಗ್ಗೆ ಮೈಸೂರು ಅರಮನೆಗೆ ಆಗಮಿಸಿದರು.
ಮೈಸೂರು ಅಂಬವಿಲಾಸ ಅರಮನೆಯಲ್ಲಿ ಬೆಳಗಿನ ಉಪಹಾರ ಸವಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬಳಿಕ ಅರಮನೆಯ ಕೆಲವು ಮುಖ್ಯ ಭಾಗಗಳನ್ನು ವೀಕ್ಷಿಸಿದರು.
ಸಾಂಪ್ರದಾಯಿಕ ಮೈಸೂರು ಭಕ್ಷ್ಯಗಳಾದ ಮೈಸೂರು ಮಸಾಲೆ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಶ್ಯಾವಿಗೆ ಉಪ್ಪಿಟ್ಟು ಸಬ್ಬಕ್ಕಿ ವಡೆ, ಮೈಸೂರು ಪಾಕ್, ಗೋಧಿ ಹಾಲ್ಬಾಯಿ ಮತ್ತು ಬಾದಾಮ್ ಹಲ್ವಾ ಜೊತೆಗೆ ರಾಗಿ ಮತ್ತು ಗೋಧಿ ಬಿಸ್ಕೆಟ್, ಚಹಾ ಮತ್ತು ಕಾಫಿಯನ್ನು ರಾಷ್ಟ್ರಪತಿಗಳ ಆಹಾರ ಆದ್ಯತೆಗಳಿಗೆ ಅನುಗುಣವಾಗಿ ತಯಾರಿಸಲಾಗಿತ್ತು ಎಂದು ತಿಳಿದು ಬಂದಿದೆ.
ರಾಷ್ಟ್ರಪತಿಗಳು ಮತ್ತು ಕರ್ನಾಟಕದ ರಾಜ್ಯಪಾಲರನ್ನು ನಮ್ಮ ನಿವಾಸದಲ್ಲಿ ಸ್ವಾಗತಿಸಿರುವುದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆಯುಂಟುಮಾಡಿದೆ. ನನ್ನ ಆಹ್ವಾನವನ್ನು ಸ್ವೀಕರಿಸಿ ಗೌರವಿಸಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಈ ಹೆಮ್ಮೆ ಮತ್ತು ಗೌರವದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ರಾಷ್ಟ್ರಪತಿಗಳ ಆತಿಥ್ಯ ವಹಿಸುವುದು ನನಗೆ ಅಪಾರ ಗೌರವ ಮತ್ತು ಸಂತೋಷದ ಕ್ಷಣವಾಗಿತ್ತು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.