×
Ad

ಆ.10ರಂದು ಮೈಸೂರಿನಲ್ಲಿ ಬ್ಯಾರಿ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ

Update: 2025-08-08 21:59 IST

ಮಂಗಳೂರು, ಆ.8: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ಪಿರ್ಸಪ್ಪಾಡ್ ಬ್ಯಾರಿ ಕುಟುಂಬ ಸಮ್ಮಿಲನವು ಆ.10ರಂದು ಮೈಸೂರಿನಲ್ಲಿ ನಡೆಯಲಿದೆ.

ಮೈಸೂರಿನ ಬ್ಯಾರಿಸ್ ವೆಲ್ಪೇರ್ ಅಸೋಸಿಯೇಶನ್‌ನ ಸಹಯೋಗದೊಂದಿಗೆ ತಿಲಕ ನಗರದ ಈದ್ಗಾ ಮೈದಾನ ಮುಂಭಾಗದಲ್ಲಿರುವ ಎ.ಆರ್.ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಜೆ 4ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ತನ್ವೀರ್ ಸೇಠ್ ಬೆಲ್ಕಿರಿ ದ್ವೈಮಾಸಿಕ ಬಿಡುಗಡೆ ಮಾಡಲಿದ್ದು, ಶಾಸಕ ಕೆ. ಹರೀಶ್ ಗೌಡ ಪೆರಿಮೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಬೆಂಗಳೂರಿನ ದಿ ಬ್ಯಾರೀಸ್ ವೆಲ್ಪೇರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಡಾ.ಮಕ್ಸೂದ್ ಅಹ್ಮದ್ ಮುಲ್ಕಿ, ಹಾಡುಗಾರ ಪಿ.ಎ.ಹಸನಬ್ಬ ಮೂಡುಬಿದಿರೆ, ಕವಿ ಹೈದರಲಿ ಕಾಟಿಪಳ್ಳ ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ದಿ ಬ್ಯಾರೀಸ್ ವೆಲ್ಪೇರ್ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿ ಸದಸ್ಯ ಅತ್ತೂರು ಚೆಯ್ಯಬ್ಬ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಹಾಗೂ ದ.ಕ. ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯಸ್ ರೋಡ್ರಿಗಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪೂ.11ಕ್ಕೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್ (ಅಬ್ದುಲ್ಲ) ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಬ್ಯಾರಿ ಸಾಂಪ್ರದಾಯಿಕ ಆಹಾರ ಮತ್ತು ಮೆಹಂದಿ ವಿನ್ಯಾಸ, ಮಕ್ಕಳಿಗೆ ಬ್ಯಾರಿ ಹಾಡು ಹಾಗೂ ಪುರುಷ, ಮಹಿಳೆ ಮತ್ತು ಮಕ್ಕಳಿಗೆ ಬ್ಯಾರಿ ಕ್ವಿಝ್ ಸ್ಪರ್ಧೆ ಏರ್ಪಡಿಸಲಾಗಿದೆ. ದಫ್ ಕುಣಿತ, ಒಪ್ಪನೆ ಹಾಡು, ಕೋಲಾಟ, ಬ್ಯಾರಿ ಹಾಡುಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News