×
Ad

ಪೋರ್ಟ್ ಬ್ಲೇರ್ ಗೆ ಇನ್ನು ಮುಂದೆ ಶ್ರೀ ವಿಜಯಪುರಂ ಎಂದು ಮರು ನಾಮಕರಣ : ಕೇಂದ್ರ ಸರಕಾರ

Update: 2024-09-13 19:30 IST

PC : indianexpress.com

ಹೊಸದಿಲ್ಲಿ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಗೆ ಇನ್ನು ಮುಂದೆ ಶ್ರೀ ವಿಜಯಪುರಂ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಶುಕ್ರವಾರ ಕೇಂದ್ರ ಸರಕಾರ ಪ್ರಕಟಿಸಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃ‍ಹ ಸಚಿವ ಅಮಿತ್ ಶಾ, ವಸಾಹತುಶಾಹಿ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿಯಿಂದ ಪ್ರೇರೇಪಿತರಾಗಿ, ದೇಶವನ್ನು ವಸಾಹತುಶಾಹಿ ಹೆಜ್ಜೆಗುರುತುಗಳಿಂದ ಮುಕ್ತಗೊಳಿಸಲು ಬಯಸಿದ್ದೇವೆ. ಹೀಗಾಗಿ ಪೋರ್ಟ್ ಬ್ಲೇರ್ ಗೆ ಇನ್ನು ಮುಂದೆ ಶ್ರೀ ವಿಜಯಪುರಂ ಎಂದು ಮರು ನಾಮಕರಣ ಮಾಡಲು ನಿರ್ಧರಿಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಈ ಹಿಂದಿನ ಹೆಸರಿನಲ್ಲಿ ವಸಾಹತುಶಾಹಿ ಪರಂಪರೆ ಅಡಗಿತ್ತು. ಆದರೆ, ಭಾರತವು ಸ್ವಾತಂತ್ರ್ಯ ಹೋರಾಟದಲ್ಲಿ ಗಳಿಸಿದ ಜಯವನ್ನು ಶ್ರೀ ವಿಜಯಪುರಂ ಸಂಕೇತಿಸುತ್ತದೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ವಿಶಿಷ್ಟ ಪಾತ್ರ ನಿರ್ವಹಿಸಿತ್ತು ಎಂದು ಅಮಿತ್ ಶಾ ಪ್ರತಿಪಾದಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಚರಿತ್ರೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸಾಟಿಯಿಲ್ಲದ ಸ್ಥಾನವಿದೆ. ಒಂದು ಕಾಲದಲ್ಲಿ ಈ ಪ್ರಾಂತ್ಯವು ಚೋಳ ಸಾಮ್ರಾಜ್ಯದ ನೌಕಾನೆಲೆಯಾಗಿ ಕಾರ್ಯನಿರ್ವಹಿಸಿತ್ತು. ಈಗ ನಮ್ಮ ವ್ಯೂಹಾತ್ಮಕ ಮತ್ತು ಅಭಿವೃದ್ಧಿ ಬಯಕೆಗಳಿಗೆ ಅತಿ ಮುಖ್ಯ ನೆಲೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News