ʼಧರ್ಮಾಂಧ ರಾಜಕಾರಣʼ ನಿಜವಾದ ಪನೌತಿ: ಕಿಶೋರ್ ಕುಮಾರ್
ನಟ ಕಿಶೋರ್ ಕುಮಾರ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಪನೌತಿ (ಅಪಶಕುನ) ಎಂದು ಕರೆದಿರುವ ಬಗ್ಗೆ ಬಹುಭಾಷಾ ನಟ ಕಿಶೋರ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೊ…ಜೈಶ್ರೀರಾಮನಿಂದ ಗೆಲ್ಲುವುದೂ ಅಷ್ಟೇ ಸುಳ್ಳು.. ಎಂದು ಅವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇಂದಿನ ವ್ಯವಸ್ಥೆಯ ವ್ಯಂಗ್ಯವೇನೆಂದರೆ ಸಜ್ಜನರ ಆಟ ಎಂದು ಕರೆಯಲ್ಪಡುವ ಕ್ರಿಕೆಟ್ಟಿನಲ್ಲೂ, ಪ್ರೇಕ್ಷಕರನ್ನು ಜೈ ಶ್ರೀರಾಮ್ ಎಂದು ಧಾರ್ಮಿಕ ಘೋಷಣೆಗಳನ್ನು ಕೂಗುವ ಮಟ್ಟಕ್ಕೆ ತಂದಿಟ್ಟವರು ಪನೌತಿಯ ಪ್ರಭಾವವನ್ನೂ ಹೆಗಲಿಗೇರಿಸಿಕೊಳ್ಳಲೇಬೇಕು ಎಂದು ಅವರು ಹೇಳಿದ್ದಾರೆ.
ಧರ್ಮಾಂಧತೆ, ಮೂಢನಂಬಿಕೆ, ಬಡತನ, ಅಸಮಾನತೆ, ನಿರುದ್ಯೊಗ ಮತ್ತು ಭ್ರಷ್ಟಾಚಾರಗಳನ್ನು ನಿಜವಾದ ಪನೌತಿ ಎಂದು ಕರೆದಿದ್ದು, ಇವುಗಳು ದೇಶವನ್ನು ವಿನಾಶದಂಚಿಗೆ ತಳ್ಳುತ್ತವೆ ಎಂದಿದ್ದಾರೆ.
“ಹೊಲಸು ಧರ್ಮಾಂಧ ರಾಜಕಾರಣದಿಂದ ಮೂಢನಂಬಿಕೆಯ ಕೂಪದಲ್ಲಿ ತಳ್ಳಲ್ಪಟ್ಟು ಮೂರ್ಖರಾದ ನಾವು ಈ ದೇಶವನ್ನು ವಿನಾಶದಂಚಿಗೆ ತಳ್ಳುತ್ತಿರುವ ಧರ್ಮಾಂಧತೆ, ಮೂಢನಂಬಿಕೆ, ಬಡತನ, ಅಸಮಾನತೆ, ನಿರುದ್ಯೊಗ ಮತ್ತು ಭ್ರಷ್ಟಾಚಾರಗಳು ನಿಜವಾದ ಪನೌತಿ ಎಂದು ತಿಳಿದುಕೊಳ್ಳಬೇಕಿದೆ“ ಎಂದು ಕಿಶೋರ್ ಅವರು ಹೇಳಿದ್ದಾರೆ.