ಜುಲೈ 17,18 ರಂದು ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ: ಕಾಂಗ್ರೆಸ್
ಫ್ಯಾಸಿಸ್ಟ್ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಸೋಲಿಸಲು ಹಾಗೂ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ದಿಟ್ಟ ದೃಷ್ಟಿಯನ್ನು ಪ್ರಸ್ತುತಪಡಿಸುವ ನಮ್ಮ ಸಂಕಲ್ಪದಲ್ಲಿ ನಾವು ಅಚಲರಾಗಿದ್ದೇವೆ: ಕೆ..ಸಿ ವೇಣುಗೋಪಾಲ್
ಕೆ..ಸಿ ವೇಣುಗೋಪಾಲ್, PTI
ಹೊಸದಿಲ್ಲಿ: ಮುಂದಿನ ಪ್ರತಿಪಕ್ಷಗಳ ಸಭೆ ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ಸೋಮವಾರ ಹೇಳಿದೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ರವಿವಾರದ ಬಂಡಾಯವು ಪ್ರತಿಪಕ್ಷಗಳ ಏಕತೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪಕ್ಷವು ಹೇಳಿಕೊಂಡ ಬೆನ್ನಲ್ಲೇ ಈ ಪ್ರಕಟನೆ ನೀಡಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ..ಸಿ ವೇಣುಗೋಪಾಲ್ ಅವರು ಈ ಬಗ್ಗೆ ಟ್ವೀಟಿಸಿದ್ದು , "ಪಾಟ್ನಾದಲ್ಲಿ ಅತ್ಯಂತ ಯಶಸ್ವಿಯಾದ ಸರ್ವಪಕ್ಷಗಳ ಸಭೆಯ ನಂತರ, ನಾವು ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ಜುಲೈ 17 ಮತ್ತು 18, 2023 ರಂದು ನಡೆಸುತ್ತೇವೆ" ಎಂದು ಘೋಷಿಸಿದರು.
"ಫ್ಯಾಸಿಸ್ಟ್ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಸೋಲಿಸಲು ಹಾಗೂ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ದಿಟ್ಟ ದೃಷ್ಟಿಯನ್ನು ಪ್ರಸ್ತುತಪಡಿಸುವ ನಮ್ಮ ಸಂಕಲ್ಪದಲ್ಲಿ ನಾವು ಅಚಲರಾಗಿದ್ದೇವೆ" ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರು ಇತ್ತೀಚೆಗೆ NCP ನಾಯಕರ ವಿರುದ್ಧ ಭ್ರಷ್ಟಾಚಾರದ ದೊಡ್ಡ ಆರೋಪ ಮಾಡಿದರು ಈಗ ನಾವು ಈ ನಾಟಕವನ್ನು ನೋಡಿದ್ದೇವೆ. ಇದು ED ಮತ್ತು ಅವರ ಏಜೆನ್ಸಿಗಳ ಸ್ಪಷ್ಟ ಪ್ರಾಯೋಜಿತ ಆಟವಾಗಿದೆ. ಇದು ಮಹಾರಾಷ್ಟ್ರ ಅಘಾಡಿ (ಎಂವಿಎ) ಮೇಲೆ ಪರಿಣಾಮ ಬೀರುವುದಿಲ್ಲ. ಬಿಜೆಪಿ ವಿರುದ್ಧ ಇನ್ನಷ್ಟು ಉಗ್ರ ಹೋರಾಟ ಮಾಡುತ್ತೇವೆ. ಇದು ಪ್ರತಿಪಕ್ಷಗಳ ಏಕತೆಯ ಮೇಲೆ ಪರಿಣಾಮ ಬೀರುವುದಿಲ್ಲ, ಇದು NCP ವಿಷಯವಾಗಿದೆ. ಶರದ್ ಪವಾರ್ ಅವರು ಪಕ್ಷದ ಅತ್ಯಂತ ಎತ್ತರದ ನಾಯಕರಾಗಿದ್ದು, ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಕೆಲವು ನಾಯಕರು ಪಕ್ಷವನ್ನು ಬದಲಾಯಿಸುತ್ತಾರೆ ಎಂದರೆ ಪಕ್ಷದ ಬೆಂಬಲಿಗರು ಮತ್ತು ಇತರ ಸದಸ್ಯರು ಅವರೊಂದಿಗೆ ಹೋಗುತ್ತಾರೆ ಎಂದು ಅರ್ಥವಲ್ಲ ”ಎಂದು ವೇಣುಗೋಪಾಲ್ ಅವರನ್ನು ಉಲ್ಲೇಖಿಸಿ AMಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.