ಅಕ್ರಮ ಗೋಸಾಗಾಟದ ಮೂಲ ಎಲ್ಲಿರುತ್ತದೆ ? ಗುಂಡೇಟು ಯಾರಿಗೋ, ಲಾಭ ಯಾರಿಗೋ ?
ಸಾಂದರ್ಭಿಕ ಚಿತ್ರ (PTI)
ಬಜರಂಗದಳ ಕಾರ್ಯಾಚರಣೆಯೋ, ಪೊಲೀಸ್ ಕಾರ್ಯಾಚರಣೆಯೋ ಬಲಿಯಾಗುವುದು ದನಸಾಗಾಟದ ಲಾರಿ ಡ್ರೈವರ್ ಮತ್ತು ಕ್ಲೀನರ್ ಮಾತ್ರ. 'ಗೋಸಾಗಾಟಗಾರರಿಗೆ ಗುಂಡೇಟು, ಗೋಸಾಗಾಟಗಾರರಿಗೆ ಥಳಿತ, ಗೋಸಾಗಾಟಗಾರರ ಬಂಧನ' ಎಂಬ ಸುದ್ದಿ ಮತ್ತು ಚರ್ಚೆಯೊಳಗೆ ಪ್ರಕರಣ ಮುಗಿದುಹೋಗುತ್ತದೆ. ಗೋಸಾಗಾಟದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಿದ ನಿದರ್ಶನಗಳು ಬಹಳ ಕಡಿಮೆ. ಕಳ್ಳತನ ಮಾಡಿದ ದನಗಳೇ? ಕಳ್ಳತನವಾಗಿದ್ದರೆ ಯಾವ ಮನೆಯಿಂದ ? ಖರೀದಿ ಮಾಡಿದ ದನಗಳೇ ? ಯಾರು ಎಲ್ಲಿಂದ ಎಲ್ಲಿಗೆ ಸಾಗಿಸುತ್ತಿದ್ದರು ? ದನಸಾಗಾಟಗಾರರ ನಿಜವಾದ ಮಾಲಕರು ಯಾರು ಎಂಬುದು ತನಿಖೆಯೇ ಆಗುವುದಿಲ್ಲ. ಈ ಹಿಂದೆ ಇಂತಹ ತನಿಖೆಗೆ ಒಳಪಟ್ಟ ಕೆಲವು ಅಪರೂಪದ ಘಟನೆಗಳು ಇಲ್ಲಿವೆ.
2020 ಡಿಸೆಂಬರ್ 13: ಉಡುಪಿ ಜಿಲ್ಲೆಯ ಕಾರ್ಕಳದ ದನಕಳ್ಳತನದ ಪ್ರಕರಣಗಳು ವಿಪರೀತವಾದವು. ಯಾವಾಗ ಬೇಕಾದರೂ ದನಕಳ್ಳತನದ ವಿಚಾರದಲ್ಲಿ ಗಲಾಟೆಗಳಾಗಬಹುದು ಎಂಬ ಗುಮಾನಿಯಿಂದ ಪೊಲೀಸರು ಯಾಸಿನ್ ಎಂಬ ದನಕಳ್ಳನನ್ನು ಅರೆಸ್ಟ್ ಮಾಡಿದರು. ಯಾಸಿನ್ ನನ್ನು ಪೊಲೀಸರು ಸುಧೀರ್ಘವಾಗಿ ವಿಚಾರಣೆ ನಡೆಸಿದಾಗ ಆತ ಅನಿಲ್ ಪ್ರಭು ಹೆಸರು ಹೇಳಿದ. ಪೊಲೀಸರು ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಅನಿಲ್ ಪ್ರಭುವನ್ನು ವಿಚಾರಣೆ ನಡೆಸಿದಾಗ ಕಾರ್ಕಳದಲ್ಲಿ ನಡೆದ ಬಹುತೇಕ ದನಗಳ ಕಳ್ಳ ಸಾಗಾಟ. ದನಗಳ ಕಳ್ಳತನವನ್ನು ಈತನೇ ಸಂಘಟಿಸಿರುವುದಾಗಿ ತಿಳಿದು ಬಂತು. ಪೊಲೀಸರು ಅನಿಲ್ ಪ್ರಭುವನ್ನು ಬಂಧಿಸಿ ಜೈಲಿಗಟ್ಟಿದರು. ಈ ಅನಿಲ್ ಪ್ರಭು ಉಡುಪಿಯ ಕಾರ್ಕಳದಲ್ಲಿ ಬಜರಂಗದಳದ ಸಂಚಾಲಕನಾಗಿದ್ದ. ಗೋಹತ್ಯಾ ವಿರೋಧಿ ಹೋರಾಟದಲ್ಲಿ ಸಕ್ರೀಯನಾಗಿದ್ದ ಬಜರಂಗದ ಸಂಚಾಲಕನಾಗಿದ್ದ ಅನಿಲ್ ಪ್ರಭು ಗೋಕಳ್ಳತನವನ್ನು ಸಂಘಟಿತವಾಗಿ ಮಾಡುತ್ತಿದ್ದ.
ರೈತರು ಮುದಿ ದನಗಳನ್ನು ಹಣ ಪಡೆದುಕೊಂಡು ವ್ಯಾಪಾರಿಗಳಿಗೆ ಮಾರುವುದನ್ನು ತೀವ್ರವಾಗಿ ವಿರೋಧಿಸಿ ಪ್ರತಿಭಟಿಸುತ್ತಿದ್ದ ಬಜರಂಗದಳದ ಸಂಚಾಲಕನಾಗಿದ್ದ ಅನಿಲ್ ಪ್ರಭು ದನ ಕಳ್ಳತನಕ್ಕಾಗಿಯೇ ತಂಡ ಕಟ್ಟಿಕೊಂಡಿದ್ದ.
2021ರ ನವೆಂಬರ್ 08 : ಮೂಡಬಿದ್ರೆಯಲ್ಲಿ ದನವನ್ನು ಕದ್ದು ಮಾಂಸಕ್ಕಾಗಿ ಮಾರಾಟ ಮಾಡುತ್ತಿದ್ದ ಮೂವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ನಂತರ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಆರೋಪಿಗಳು ಸ್ಥಳೀಯ ಹಿಂದೂ ಕಾರ್ಯಕರ್ತರಾಗಿದ್ದು ವಾಲ್ಪಾಡಿ ಗ್ರಾಮದ ಪವನ್ ಕುಮಾರ್, ಮಾರೂರಿನ ಸತೀಶ್ ಮತ್ತು ಜಯಾನಂದ ಎಂದು ಗುರುತಿಸಲಾಯಿತು. ಯಾರೋ ಮುಸ್ಲಿಂ ಯುವಕರು ದನ ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂದು ಗ್ರಾಮದ ಜನ ಅನುಮಾನಿಸಿದ್ದರು. ಕೊನೆಗೆ ಗ್ರಾಮದ ಜನರೇ ಕಾರ್ಯಾಚರಣೆ ಮಾಡಿ ಹಿಂದುತ್ವವಾದಿ ದನಕಳ್ಳರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
2021 ಸೆಪ್ಟೆಂಬರ್ 17 : ಮೂಡಬಿದ್ರೆಯಲ್ಲಿ ಪದೇ ಪದೇ ಅಕ್ರಮ ದನ ಸಾಗಾಟ ನಡೆಯುತ್ತಿತ್ತು. ಬಜರಂಗದಳ ಹಲವು ಬಾರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು.. ಸ್ಥಳೀಯ ಮುಸ್ಲಿಂ ಯುವಕರೇ ದನವನ್ನು ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂಬುದು ಬಜರಂಗದಳ ಆರೋಪವಾಗಿತ್ತು. "ಒಂದೋ ಪೊಲೀಸರು ಅಕ್ರಮ ದನ ಸಾಗಾಟ ತಡೆಯಬೇಕು. ಪೊಲೀಸರಿಗೆ ಆಗದೇ ಇದ್ದಲ್ಲಿ ಬಜರಂಗದಳವೇ ದನ ಸಾಗಾಟ ತಡೆಯುತ್ತದೆ. ಆಗ ಆಗುವ ಅನಾಹುತಗಳಿಗೆ ಪೊಲೀಸರೇ ಜವಾಬ್ದಾರರು" ಎಂದು ಬಜರಂಗದಳ ಹೇಳಿಕೊಂಡಿತ್ತು. ದನ ಸಾಗಾಟ ಪ್ರಕರಣವು ಕೋಮುಗಲಭೆಯಾಗಿ ಮಾರ್ಪಾಡುವುದನ್ನು ತಪ್ಪಿಸಲು ಪೊಲೀಸರು ಹಗಲು ರಾತ್ರಿ ರಸ್ತೆಯಲ್ಲಿ ನಾಕಾಬಂಧಿ ಹಾಕಿದರು.
ಮೂಡಬಿದ್ರೆಯ ಮೂಡುಮಾರ್ನಾಡು ಗ್ರಾಮದ ಗುಡ್ಡದಮೇಲು ರಸ್ತೆಯಲ್ಲಿ ಪೊಲೀಸರು ನಾಕಾಬಂಧಿ ನಡೆಸಿ ವಾಹನಗಳ ತಪಾಸಣೆ ನಡೆಸಿದಾಗ ಒಂದು ಟೆಂಪೋದಲ್ಲಿ ಎರಡು ದನ ಮತ್ತು ಎರಡು ಹೋರಿಯನ್ನು ಸಾಗಿಸಲಾಗುತ್ತಿತ್ತು. ದನ ಹೋರಿ ಮತ್ತು ಟೆಂಪೋವನ್ನು ವಶಕ್ಕೆ ಪಡೆದು ಆರೋಪಿಗಳನ್ನು ವಿಚಾರಿಸಿದಾಗ ಆರೋಪಿಗಳು ಸ್ಥಳೀಯ ಹಿಂದುತ್ವವಾದಿ ಕಾರ್ಯಕರ್ತರಾಗಿದ್ದ ಹರೀಶ್ಚಂದ್ರ ಆಚಾರ್ಯ ಮತ್ತು ಕರಿಯ ಎಂಬವರಾಗಿದ್ದರು. ಪೊಲೀಸರು 2021 ಸೆಪ್ಟೆಂಬರ್ 17 ರಂದು ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಕಸಾಯಿಖಾನೆಗಳಿಗೆ ಅಕ್ರಮವಾಗಿ ದನ ಸಾಗಾಟ ಮಾಡುವುದನ್ನು ಪೊಲೀಸರು ತಡೆಯದೇ ಇದ್ದರೆ ಬಜರಂಗದಳವೇ ಬೀದಿಗಿಳಿಯಬೇಕಾಗುತ್ತದೆ : ಗೋ ಮಾತೆಯ ರಕ್ಷಣೆಗಾಗಿ ನಡೆಯುವ ರಕ್ತಪಾತಕ್ಕೆ ಪೊಲೀಸರೇ ಹೊಣೆ' ಎಂದು ಬೆಳ್ತಂಗಡಿಯ ಬಜರಂಗದಳ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಈ ಹಿನ್ನಲೆಯಲ್ಲಿ ರಾತ್ರಿಯಿಡೀ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟು ಲಾರಿ, ಟೆಂಪೋಗಳನ್ನು ಪರಿಶೀಲನೆ ಮಾಡುತ್ತಿದ್ದರು.
ಪೂಂಜಾಲಕಟ್ಟೆ ಉಪಪೊಲೀಸ್ ನಿರೀಕ್ಷಕ ಕುಟ್ಟಿ ಎಂ. ಕೆ. ನೇತೃತ್ವದ ಪೊಲೀಸ್ ತಂಡ ಬೆಳ್ತಂಗಡಿಯ ಸೋಣಂದೂರು ಶಾಲಾ ಬಳಿ ಟೆಂಪೋವೊಂದನ್ನು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಅದರಲ್ಲಿ ಎರಡು ಹೋರಿಗಳು ಮತ್ತು ಕರುಗಳು ಪತ್ತೆಯಾದವು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪಣಕಜೆ ಸಬರಬೈಲು ನಿವಾಸಿ ಗಣೇಶ್ ಎಂಬುದು ಬಯಲಾಯಿತು. ಈತ ಸ್ಥಳೀಯ ಹಿಂದುತ್ವವಾದಿ ಕಾರ್ಯಕರ್ತನಾಗಿದ್ದು ನವಾಝ್ ಎಂಬಾತನ ಸಹಾಯ ಪಡೆದು ದನಗಳನ್ನು ಕಳ್ಳತನ ಮಾಡಿ ಕಸಾಯಿಖಾನೆಗೆ ಮಾಂಸಕ್ಕಾಗಿ ಮಾರಾಟ ಮಾಡುತ್ತಿದ್ದ. 1,020,000 ಮೌಲ್ಯದ ಹೋರಿ ಕರುಗಳು ಮತ್ತು ಟೆಂಪೋ ವನ್ನು ವಶಪಡಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2021 ಸೆಪ್ಟೆಂಬರ್ 23: ನೆಲ್ಯಾಡಿ ರಸ್ತೆಯ ತೋಟ ಎಂಬಲ್ಲಿ ಅಪೆ ರಿಕ್ಷಾವೊಂದು ಉರುಳಿ ಬಿತ್ತು. ಆ ರಿಕ್ಷಾದಲ್ಲಿ ಅಮಾನವೀಯ ರೀತಿಯಲ್ಲಿ ದನಗಳನ್ನು ತುಂಬಿಸಲಾಗಿದ್ದು ರಿಕ್ಷಾದ ಜೊತೆ ದನ ಕರುಗಳೂ ರಸ್ತೆಗೆ ಬಿದ್ದವು. ರಿಕ್ಷಾವನ್ನು ಎಳೆದು ನಿಲ್ಲಿಸಿದ ಆರೋಪಿಗಳು ರಿಕ್ಷಾದೊಳಗೆ ಮತ್ತೆ ದನ ಕರುಗಳನ್ನು ತುಂಬಿಸಲು ಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಜನ ಜಮಾವಣೆಗೊಂಡು ವಿಚಾರಿಸಿದಾಗ ರಿಕ್ಷಾ ಚಾಲಕ ಸಫೀಕ್ ಎಂಬಾತ ರಿಕ್ಷಾದ ಜೊತೆ ಪರಾರಿಯಾದ. ಸ್ಥಳದಲ್ಲಿದ್ದ ಮತ್ತೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದಾಗ ಆತ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಗುರುಪ್ರಸಾದ್ ಎಂದು ತಿಳಿದು ಬಂತು. ಗುರುಪ್ರಸಾದನು ದನವನ್ನು ಖರೀದಿಸಿಯೋ, ಕಳ್ಳತನ ಮಾಡಿಯೋ ಮಾಂಸಕ್ಕಾಗಿ ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದನು. ಈ ಗುರುಪ್ರಸಾದನು ಈ ಹಿಂದೆ ಕೇಸರಿ ಶಾಲು ಹಾಕಿ ಹಲವು ಹಿಂದೂ ಸಮಾಜೋತ್ಸವಗಳಲ್ಲಿ ಬಾಗಿಯಾಗಿದ್ದನಂತೆ. ಉಪ್ಪಿನಂಗಡಿ ಪೊಲೀಸರು ಗುರುಪ್ರಸಾದನ ವಿರುದ್ಧ ಆ.ಕ್ರ.96/2021 ಕಲಂ 11(ಡಿ) ಕಲಂ 66(1) 192 ಎ ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2020 ಸೆಪ್ಟೆಂಬರ್ 04 : ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಓಮಿನಿ ಮಾರುತಿ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾಗ ಪುತ್ತೂರು ನಗರ ಪೊಲೀಸ್ ಠಾಣಾ ಎಸೈ ನೇತೃತ್ವದ ತಂಡ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಕಾರನ್ನು ಪರಿಶೀಲನೆ ನಡೆಸಿದಾಗ ಕಾರಿನ ಒಳಗೆ ಹಿಂಸಾತ್ಮಾಕ ರೀತಿಯಲ್ಲಿ ಕರುವಿನ ಕೈ ಕಾಲುಗಳನ್ನು ಕಟ್ಟಿ ಅಡ್ಡವಾಗಿ ಮಲಗಿಸಿರುವುದು ಕಂಡು ಬಂದಿದೆ. ಕಾಸರಗೋಡು ಪಾಲಾರ್ ಬಂದಡ್ಕ ನಿವಾಸಿಗಳಾದ ಶಿವಪ್ರಸಾದ್ ಭಟ್ ಕೆ (52) ಮತ್ತು ಚಂದ್ರನ್ ಟಿ (34) ಎಂಬವರುಗಳನ್ನು ವಶಕ್ಕೆ ಪಡೆದು, ವಾಹನ ಮತ್ತು ಜಾನುವಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಟ್ಲದ ಇಡ್ಕಿದು ಗ್ರಾಮದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ಪತ್ತೆ ಹಚ್ಚಿದರು. ಜೀಪೊಂದರಲ್ಲಿ ತೀರಾ ಅಮಾನವೀಯವಾಗಿ ದನಗಳನ್ನು ತುಂಬಿಸಿ ಸಾಗಿಸಲಾಗುತ್ತಿತ್ತು. ಪೊಲೀಸರು ದನ ಕಳ್ಳಸಾಗಾಟದ ಜೀಪನ್ನು ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೇ ಇದ್ದಾಗ ಬೆನ್ನಟ್ಟಿ ನಿಲ್ಲಿಸಬೇಕಾಯಿತು. ಮೂವರಿದ್ದ ಜೀಪು ನಿಂತ ತಕ್ಷಣ ಒಬ್ಬಾತ ತಪ್ಪಿಸಿಕೊಂಡರೆ ಉಳಿದವರಿಬ್ಬರು ಪೊಲೀಸರ ಕೈಗೆ ಸಿಕ್ಕಿ ಬಿದ್ದರು. ಬಂಧಿತ ಆರೋಪಿಯನ್ನು ಮಿತ್ತೂರು ಬರ್ಕೋಡಿ ನಿವಾಸಿ ಪದ್ಮನಾಭ ಗೌಡ ಎಂದು ಗುರುತಿಸಲಾಯಿತು. ಪದ್ಮನಾಭಗೌಡ, ದನಗಳು ಮತ್ತು ಜೀಪನ್ನು ವಶಪಡಿಸಿಕೊಂಡ ಪೊಲೀಸರು 2020 ರ ಜುಲೈ 30 ರಂದು ಕೇಸು ದಾಖಲಿಸಿಕೊಂಡಿದ್ದಾರೆ.
2020 ಜುಲೈ 20 : ದೇಶದಾದ್ಯಂತ ಕೋವಿಡ್ ಲಾಕ್ಡೌನ್ ಇತ್ತು. ಮೀನು, ಕೋಳಿ, ಮಾಂಸದಂಗಡಿ, ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿಮುಂಗಟ್ಟುಗಳು ಬಂದ್ ಆಗಿದ್ದವು. ಸರ್ಕಾರಿ ಇಲಾಖೆ, ಆಸ್ಪತ್ರೆ, ತುರ್ತು ಸೇವೆಗಳು, ಪತ್ರಕರ್ತರಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ವಾಹನ ಪಾಸ್ ಅನ್ನು ಪೊಲೀಸರು ನೀಡುತ್ತಿದ್ದರು. ಅದೇ ರೀತಿ ತರಕಾರಿ, ಕೋಳಿ ಕುರಿ ಸಾಗಾಟಗಾರರಿಗೂ ಪಾಸ್ ನೀಡಲಾಗುತ್ತಿತ್ತು.
ಅವತ್ತು ಆಟಿ ಅಮಾವಾಸ್ಯೆಯ ದಿನ. ಬೆಳ್ತಂಗಡಿಯ ಸುರ್ಯ ಎಂಬಲ್ಲಿನ ಮನೆಯ ಕೊಟ್ಟಿಗೆಯಿಂದ ದನವನ್ನು ಕಳ್ಳತನ ಮಾಡಲಾಗುತ್ತೆ. ಆ ಮನೆಯವರು ನೋಡ ನೋಡುತ್ತಿದ್ದಂತೆ ಪಿಕಪ್ ವಾಹನದಲ್ಲಿ ಕೊಟ್ಟಿಯಲ್ಲಿದ್ದ ದನಗಳನ್ನು ತುಂಬಿಸಿಕೊಂಡು ಪರಾರಿಯಾಗುತ್ತಾರೆ. ದನ ಕಳ್ಳತನದ ಪಿಕಪ್ ವಾಹನಕ್ಕೆ ಇನ್ನೊಂದು ಬೆಂಗಾವಲು ಕಾರು ಕೂಡಾ ಇರುತ್ತದೆ. ಇಷ್ಟು ವ್ಯವಸ್ಥಿತವಾಗಿ ದನವನ್ನು ಕೊಟ್ಟಿಗೆಯಿಂದಲೇ ಕಳ್ಳತನ ಮಾಡಲಾಗುತ್ತೆ. ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಊರಿಗೆ ಹಬ್ಬುತ್ತೆ. ಹೀಗಾದರೆ ಬದುಕುವುದು ಹೇಗೆ ? ಕೊಟ್ಟಿಗೆಗೇ ನುಗ್ಗಿ ದನ ಕಳ್ಳತನ ಮಾಡುವ ಮಟ್ಟಿಗೆ ಮುಸ್ಲಿಮರು ಬಂದರು ಎಂದರೆ ಏನರ್ಥ ಎಂದು ಜನ ಲೊಚಗುಟ್ಟುತ್ತಾರೆ. ಒಂದಷ್ಟು ಯುವಕರು ಸಂಘಟಿತರಾಗಿ ದನ ಕಳ್ಳರನ್ನು ಹಿಡಿಯಲೇಬೇಕು ಎಂದು ಊರಿಗೆ ನಾಕಾಬಂಧಿ ಹಾಕಿದಾಗ ಪಿಕಪ್ ವಾಹನ ಸಿಕ್ಕಿ ಬಿತ್ತು. ದನಗಳಿದ್ದ ಪಿಕಪ್ ನಿಲ್ಲುತ್ತಿದ್ದಂತೆ ಆರೋಪಿಗಳು ಹಿಂದುಗಡೆ ಬರುತ್ತಿದ್ದ ಬೆಂಗಾವಲು ಕಾರು ಹತ್ತಿ ಪರಾರಿಯಾದರು. ಅಲ್ಲಿದ್ದ ಯುವಕರು ಗುರುವಾಯನಕೆರೆಯ ಸ್ಥಳೀಯರಿಗೆ ಮಾಹಿತಿ ನೀಡಿದಾಗ ಗುರುವಾಯನಕೆರೆಯ ಸ್ಥಳೀಯರು ದನ ಕಳ್ಳಸಾಗಾಟಗಾರರು ಪರಾರಿಯಾಗುತ್ತಿದ್ದ ವಾಹವನ್ನು ತಡೆದು ನಿಲ್ಲಿಸಿದರು.
ಕೊಟ್ಟಿಗೆಯಲ್ಲಿ ಕಟ್ಟಿದ್ದ ದನವನ್ನು ಕಳ್ಳಸಾಗಾಟಗಾಟ ಮಾಡುತ್ತಿದ್ದ ಆರೋಪಿ ರಾಜೇಶ್ ಎಂದು ಗುರುತಿಸಲಾಯಿತು. ರಾಜೇಶನು ತನ್ನ ಪ್ರಭಾವ ಬಳಸಿ ಚಿಕನ್ ಸೆಂಟರ್ ಗೆ ಕೋಳಿ ಸಾಗಾಟ ಎಂದು ಕೋವಿಡ್ 19 ಪಾಸ್ ತೆಗೆದುಕೊಂಡು ವಾಹನಕ್ಕೆ ಅಂಟಿಸಿ ಅದರಲ್ಲಿ ದನ ಕಳ್ಳಸಾಗಾಟ ಮಾಡುತ್ತಿದ್ದ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯರಿಗೆ ಗಾಯಗಳಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
2021 ನವೆಂಬರ್ 24 : ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಅಕ್ರಮ ಗೋ ಸಾಗಾಟ ಪತ್ತೆಯಾಯಿತು. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಎರಡು ಹಸು, ಒಂದು ಕರು ಸಹಿತ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಬಸವರಾಜ್, ಅವಿನಾಶ್ ಬಿ ಆರ್, ಪುಷ್ಪರಾಜ್ ಜಿ.ಎಸ್ ಹರೀಶ್ , ಬಿ.ಎಸ್ ಹರೀಶ್, ಶೀನ ಪುಜಾರಿ ಸುಮಾರು 18,500 ರೂ ಮೌಲ್ಯದ ಎರಡು ದನಗಳನ್ನು ಮತ್ತು ಒಂದು ಕರುವನ್ನು ಮುಂಜಾನೆ 2.45 ರ ಸಮಯದಲ್ಲಿ ಕಳ್ಳಸಾಗಾಟ ಮಾಡಿ ಇಸ್ಲಾಯಿಲ್ ಎಂಬಾತನಿಗೆ ಮಾರುತ್ತಿದ್ದರು. ಖರೀದಿಸಿ ತಂದಿದ್ದೋ, ಸಾಕಿರೋ ದನಗಳೋ, ಕಳ್ಳತನದ ದನಗಳೋ ಎಂದು ತಿಳಿಯದ ವ್ಯಾಪಾರಿ ಇಸ್ಮಾಯಿಲನು ಬಸವರಾಜ್, ಅವಿನಾಶ್ ಬಿ ಆರ್, ಪುಷ್ಪರಾಜ್ ಜಿ.ಎಸ್ ಹರೀಶ್ , ಬಿ.ಎಸ್ ಹರೀಶ್, ಶೀನ ಪುಜಾರಿಯಿಂದ ದನಗಳನ್ನು ಖರೀದಿಸುತ್ತಿದ್ದನು. ಅವೆಲ್ಲವೂ ಕಳ್ಳತನದ ದನಗಳಾಗಿದ್ದು ಬಸವರಾಜ್ ಮತ್ತು ಇತರರು ನಡೆಸುತ್ತಿದ್ದರು. ಸಿಕ್ಕಿಬಿದ್ದರೆ ಇಸ್ಮಾಯಿಲ್ ಸಿಕ್ಕಿಬಿದ್ದು ದನ ಕಳ್ಳತನದ ಆರೋಪ ಮುಸ್ಲಿಮರ ಮೇಲೆ ಬರುತ್ತಿತ್ತು. ಆದರೆ ಇಲ್ಲಿ ಎಲ್ಲರೂ ಸಿಕ್ಕಿಬಿದ್ದು ಬಟಾಬಯಲಾಗಿದೆ. ಆರೋಪಿಗಳನ್ನು ತನಿಖೆ ನಡೆಸಿದ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2021 ಡಿಸೆಂಬರ್ 15: ಬೆಳ್ತಂಗಡಿಯ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಟೆಂಪೋವನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ರು. ಆ ಸಂದರ್ಭದಲ್ಲಿ ಟೆಂಪೋದಲ್ಲಿ ದನ ಕರುಗಳನ್ನು ಕಾಲು ಕಟ್ಟಿ ಮಲಗಿಸಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಟೆಂಪೋ ಚಾಲಕ ಮತ್ತು ಸಾಗಾಟಗಾರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದನವನ್ನು ಸಾಗಾಟ ಮಾಡುತ್ತಿದ್ದವನು ಬೆಳ್ತಂಗಡಿಯ ಗರ್ಡಾಡಿ ಗ್ರಾಮದ ಶೇಖರ ಎಂದು ತಿಳಿದು ಬಂತು. ಇಲ್ಲೂ ಕೂಡಾ ಡ್ರೈವರ್ ಮಾತ್ರ ಮುಸ್ಲಿಮನಾಗಿದ್ದ. ದನಕಳ್ಳ ಶೇಖರ ಬಂಧನದ ವೇಳೆಯೂ ಕೇಸರಿ ಶಾಲು ಮತ್ತು ಕೇಸರಿ ಪಂಚೆ ಉಟ್ಟುಕೊಂಡಿದ್ದ.
2021 ಫೆಬ್ರವರಿ 12: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದರು. ಮೈಸೂರಿನ ರಾಘವೇಂದ್ರ ಎಂಬಾತ ಮಂಗಳೂರು ನೋಂದಣಿ ಸಂಖ್ಯೆಯ (ಕೆಎ 19 ಎ 1801) 10 ಚಕ್ರದ ಲಾರಿಯಲ್ಲಿ 18 ಎತ್ತುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು. ಸಾಗಾಟದ ವೇಳೆ ಎರಡು ಎತ್ತುಗಳು ಸಾವನ್ನಪ್ಪಿದ್ದು, ಉಳಿದ 16 ಎತ್ತುಗಳನ್ನು ರಕ್ಷಿಸಲಾಯಿತು. ದನ ಕಳ್ಳಸಾಗಾಟದ ಖಚಿತ ಮಾಹಿತಿಯ ಆಧಾರದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ ಕೆ. ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿಯವರು ತ್ರಾಸಿ ಮರವಂತೆಯ ಬಳಿ ಈ ಕಾರ್ಯಾಚರಣೆ ನಡೆಸಿದರು. ಅಕ್ರಮ ಗೋ ಸಾಗಾಟ ವಾಹನವು ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಾಸರಗೋಡಿನ ಚೆರ್ಕಳಕ್ಕೆ ತೆರಳುತ್ತಿತ್ತು. ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ನಝೀರುಲ್ಲ (43) ಎಂಬಾತನನ್ನು ಈ ವಾಹನದ ಡ್ರೈವರ್ ಆಗಿ ನೇಮಿಸಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ರನ್ವಯ ಪ್ರಕರಣ ದಾಖಲಾಗಿದೆ.
ಹೀಗೆ ಅಕ್ರಮ ಗೋಸಾಗಾಟ ಪ್ರಕರಣದ ಮೂಲವನ್ನು ಪೊಲೀಸರು ತನಿಖೆ ನಡೆಸಬೇಕಿದೆ. ತನಿಖೆಯನ್ನೇ ನಡೆಸದೇ ಶೂಟೌಟ್ ಮಾಡುವುದರಿಂದ ಪ್ರಕರಣಕ್ಕೆ ನ್ಯಾಯ ಸಿಗುವುದಿಲ್ಲ.