×
Ad

ಎರಡು ವರ್ಷ ಕಳೆದರೂ 114 ಮನೆಗಳಿಗೆ ಹನಿ ನೀರಿಲ್ಲ

28.20 ಲಕ್ಷ ರೂ. ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ಪೂರ್ಣ

Update: 2026-07-14 14:18 IST

ಕಲಬುರಗಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ 28.20 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳು ಕಳೆದರೂ, ಕಾಳಗಿ ತಾಲೂಕಿನ ರೇವಗ್ಗಿ ಎಕ್ಸ್ಟೆನ್ಷನ್ ಬಡಾವಣೆಯ 114 ಮನೆಗಳಿಗೆ ಇನ್ನೂ ಒಂದು ಹನಿ ನೀರು ಕೂಡ ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸ್ಥಳದಲ್ಲಿ ಅಳವಡಿಸಲಾಗಿರುವ ನಾಮಫಲಕದ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನದಲ್ಲಿ ತಲಾ 12.69 ಲಕ್ಷ ರೂ. ಸೇರಿ ಒಟ್ಟು 28.20 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, 2024ರ ಡಿಸೆಂಬರ್ 12ರಂದು ಕಾಮಗಾರಿ ಪೂರ್ಣಗೊಂಡಿದೆ ಎಂದು ದಾಖಲಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡಿದೆ ಎನ್ನುವ ಫಲಕ ಮಾತ್ರ ಉಳಿದಿದ್ದು, ಯೋಜನೆಯ ಮೂಲ ಉದ್ದೇಶವಾದ ಮನೆಮನೆಗೆ ಕುಡಿಯುವ ನೀರು ಪೂರೈಕೆ ಮಾತ್ರ ಇನ್ನೂ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಸ್ಥಳೀಯರ ಪ್ರಕಾರ, ಕಾಮಗಾರಿ ವೇಳೆ ಅಳವಡಿಸಿರುವ ನಲ್ಲಿಗಳು ಕಳಪೆ ಗುಣಮಟ್ಟದ್ದಾಗಿದ್ದು, ಹಲವು ನಲ್ಲಿಗಳು ಈಗಾಗಲೇ ಮುರಿದಿವೆ. ಕೆಲವು ಕಡೆ ಪೈಪ್ ಲೈನ್‌ಗಳು ಹಾನಿಗೊಳಗಾಗಿವೆ. ಗ್ರಾಮದಲ್ಲಿ ಯೋಜನೆಗೆ ಅಗತ್ಯವಾದ ನೀರಿನ ಟ್ಯಾಂಕ್ ಕೂಡ ನಿರ್ಮಾಣವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ದಾಖಲಿಸಿರುವುದು ಅನುಮಾನಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಯೋಜನೆಯಡಿ ನೀರು ಪೂರೈಕೆ ಏಕೆ ಆರಂಭವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಅಧಿಕಾರಿಗಳ ಈ ನಡೆ ಕಳಪೆ ಕಾಮಗಾರಿ ಮತ್ತು ಅಕ್ರಮಗಳ ಬಗ್ಗೆ ಮತ್ತಷ್ಟು ಅನುಮಾನ ಮೂಡಿಸುತ್ತಿದೆ. ಸಾರ್ವಜನಿಕರ ಹಣದಲ್ಲಿ ಕೈಗೊಂಡ ಯೋಜನೆಯ ಫಲ ಜನರಿಗೆ ಸಿಗದಿರುವುದು ಅತ್ಯಂತ ದುರದೃಷ್ಟಕರ. ಕಾಮಗಾರಿ ಗುಣಮಟ್ಟ, ವೆಚ್ಚ ಮತ್ತು ಅನುಷ್ಠಾನದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಮುಖಂಡ ಮೋಶಿನ್ ಪಟೇಲ್ ಆಗ್ರಹಿಸಿದ್ದಾರೆ.

ಜನಜೀವನಕ್ಕೆ ನೇರವಾಗಿ ಸಂಬಂಧಿಸಿದ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯ ಒದಗಿಸುವ ಯೋಜನೆಗಳು ನೆಲಮಟ್ಟದಲ್ಲಿ ವಿಫಲವಾಗುತ್ತಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರೇವಗ್ಗಿ ಎಕ್ಸ್ಟೆನ್ಷನ್ ಬಡಾವಣೆಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ನೀರು ಸರಬರಾಜು ಪರೀಕ್ಷೆ ಮಂಗಳವಾರ ಮಾಡಲಾಗಿದೆ. ಭೇಡಸೂರನಿಂದ ಬಲ್ಕ್ ನೀರು ಪೂರೈಸಲಾಗುತ್ತಿರುವುದರಿಂದ ಪ್ರತ್ಯೇಕ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿಲ್ಲ. ಬೋರ್‌ವೆಲ್ ಸಂಪರ್ಕ ಕಲ್ಪಿಸಿ ಬಡಾವಣೆಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆ. ಗ್ರಾಮ ಪಂಚಾಯಿತಿಗೆ ಇನ್ನೂ ಹಸ್ತಾಂತರಿಸಿಲ್ಲ. ಶೀಘ್ರದಲ್ಲೇ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿ ಮನೆಗಳಿಗೆ ನೀರು ತಲುಪಿಸುವ ಕ್ರಮ ಕೈಗೊಳ್ಳಲಾಗುವುದು.

-ರುಕುಮೊದ್ದೀನ್, ಜೆಇ, ಕಾಳಗಿ

ಅಪೂರ್ಣ ಕಾಮಗಾರಿ ಆಗಿದೆ. ಆದರೆ, ಪೂರ್ಣ ಕಾಮಗಾರಿ ನಡೆದಿದೆ ಎಂದು ಬೋರ್ಡ್ ಹಾಕಿದ್ದಾರೆ. ಇನ್ನೇನು ನೀರು ಸರಬರಾಜು ಆಗುತ್ತೆ ಅಂತ ಹೇಳುತ್ತಲೇ ಎರಡು ವರ್ಷ ಕಳೆದಿವೆ. ಹನಿ ನೀರು ಬರುತ್ತಿಲ್ಲ. ಶೀಘ್ರ ನೀರು ಸರಬರಾಜು ಮಾಡಿ ಅನುಕೂಲ ಮಾಡಬೇಕು.

-ಜಾನಸನ್,

ರೇವಗ್ಗಿ ಎಕ್ಸ್ಟೆನ್ಷನ್ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News